ಭಗವಂತನನ್ನು ಒಲಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಅವೆಲ್ಲವುಗಳಲ್ಲಿ ಸರಳವಾದ ಮಾರ್ಗ ಯಾವುದು ಎನ್ನುವುದನ್ನು ಬಸವಣ್ಣನವರು ಇಲ್ಲಿ ತಮ್ಮ ವಚನದ ಮೂಲಕ ತಿಳಿಸಿದ್ದಾರೆ. ಭಗವಂತನು ಸಂಗೀತಪ್ರಿಯ ಎಂದು ಹಲವರು ಸಂಗೀತದ ಮುಖಾಂತರ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವೇದಾಗಮಗಳಿಗೆ ಭಗವಂತ ಒಲಿಯುತ್ತಾನೆ ಎಂದು ಹಲವರು ವೇದಾಗಮಗಳ ಹೋಗುತ್ತಾರೆ. ರಾವಣನು ಭಗವಂತನನ್ನು ಸಂಗೀತದ ಮುಖಾಂತರವೆ ಒಲಿಸಿಕೊಳ್ಳಲು ಪ್ರಯತ್ನಿಸಿ ತನ್ನ ಆಯುಷ್ಯವನ್ನೇ ಅರ್ಧ ಮಾಡಿಕೊಂಡ. ಸದಾಕಾಲ ವೇದವನ್ನೆ ಪಠಿಸುವ ಬ್ರಹ್ಮನು ತನ್ನ ಒಂದು ಶಿರವನ್ನೇ ಕಳೆದುಕೊಳ್ಳಬೇಕಾಯಿತು. ಅದಕ್ಕೆ ಭಗವಂತ ನಾದಪ್ರಿಯನೂ ಅಲ್ಲ; ವೇದಪ್ರಿಯನು ಅಲ್ಲ. ಆತ ಭಕ್ತಿಪ್ರಿಯನಾಗಿದ್ದಾನೆ ಎನ್ನುವುದು ಈ ವಚನದ ಸಾರವಾಗಿದೆ. ಆದ್ದರಿಂದ ನಾವೆಲ್ಲರೂ ದೇವರ ಬಗ್ಗೆ ಶುದ್ಧ ಭಕ್ತಿಯಿಂದ ಇದ್ದರೆ ಎಲ್ಲವನ್ನೂ ಪಡೆಯಬಹುದು.