ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ | 3-5-2020ರಿಂದ 9-5-2020 ರವರೆಗೆ

Last Updated 3 ಮೇ 2020, 2:54 IST
ಅಕ್ಷರ ಗಾತ್ರ

ಮೇಷ

ಅಧ್ಯಾತ್ಮದ ವಿಷಯದಲ್ಲಿ ಕೆಲವು ವಿದ್ವಾಂಸರೊಡನೆ ಚರ್ಚಿಸುವ ಅವಕಾಶ ದೊರೆಯುತ್ತದೆ. ಜನರಲ್ಲಿ ಸಾಮಾಜಿಕ, ರಾಜಕೀಯವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುವಿರಿ. ಹಣಕಾಸಿನ ಸ್ಥಿತಿ ಮಾಮೂಲಿನಂತೆ ಇರುತ್ತದೆ. ನೀವು ಆರಂಭಿಸಿರುವ ಹೊಸ ಯೋಜನೆಯನ್ನು ನಿಮ್ಮ ಕೈಕೆಳಗಿನ ಅಧಿಕಾರಿಗಳೊಡನೆ ಪದೇ ಪದೇ ಪರಿಶೀಲಿಸುವುದು ಉತ್ತಮ. ತಪ್ಪಿಹೋಗಿದ್ದ ಅಧಿಕಾರಗಳು ಪುನಾ ದೊರೆಯುವ ಅವಕಾಶಗಳಿವೆ. ಅನವಶ್ಯ ಖರ್ಚುಗಳನ್ನು ಕಡಿಮೆ ಮಾಡಿ.

ವೃಷಭ

ಉದ್ಯಮಿಗಳಿಗೆ ಹೊಸಬರೊಬ್ಬರ ಪರಿಚಯವಾಗಿ ಬೇಕಾದ ಸಲಹೆ ಸೂಚನೆ ಕೊಡುವರು. ಇದರಿಂದ ಕಠಿಣ ಸಮಸ್ಯೆಗಳು ಸುಲಭವಾಗಿ ಬಗೆಹರಿಯುವುವು. ಶಕ್ತಿಮೀರಿ ದುಡಿಯುವ ನಿಮಗೆ ವಿಶ್ರಾಂತಿಯ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗದ ಅವಕಾಶಗಳು ತೆರೆದುಕೊಳ್ಳುತ್ತವೆ. ವೃತ್ತಿಯಲ್ಲಿ ಪ್ರೋತ್ಸಾಹಧನ ಬರಬಹುದು. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಒದಗುತ್ತವೆ. ಮೂತ್ರ ಸಂಬಂಧಿ ರೋಗಗಳ ಬಗ್ಗೆ ಎಚ್ಚರದಿಂದಿರಿ.

ಮಿಥುನ

ಸ್ಪಷ್ಟ ನಿರ್ಧಾರಗಳಿಲ್ಲದೆ ಸ್ವಲ್ಪ ಗೊಂದಲಕ್ಕೆ ಒಳಗಾಗುವಿರಿ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳನ್ನು ಪೂರೈಸುವವರಿಗೆ ಹೆಚ್ಚಿನ ಪೂರೈಕೆಗಾಗಿ ಆದೇಶ ಸಿಗಲಿದೆ. ನಿಮ್ಮ ಅಭಿವೃದ್ಧಿಗೆ ಯಾರು ಅನಿವಾರ್ಯವಲ್ಲ, ನಿಮ್ಮ ಶಕ್ತಿ ಸಾಮರ್ಥ್ಯವೇ ಅನಿವಾರ್ಯ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರಿಗೆ ಉನ್ನತ ಅವಕಾಶಗಳು ಒದಗುತ್ತವೆ. ಅನಿರೀಕ್ಷಿತ ಧನಾಗಮನದಿಂದ ಹಳೆಯ ಸಾಲ‌‌ ತೀರಿಸಬಹುದು. ಯಾವುದರಲ್ಲೂ ಆತುರದ ನಿರ್ಧಾರಗಳು ಬೇಡ.

ಕಟಕ

ಗೆಳೆಯನೊಬ್ಬನ ಚೈತನ್ಯಕಾರಿ ಸಲಹೆಯಿಂದ ಸ್ನೇಹಿತರೊಡನೆ ನಗುವಿನ ಅಲೆ ಉಕ್ಕುವುದು. ಯಶಸ್ಸಿನ ದಾರಿಯಲ್ಲಿರುವ ನಿಮ್ಮನ್ನು ಸ್ವಾರ್ಥಿಗಳು ಮುತ್ತಿಕೊಳ್ಳುವ ಸಾಧ್ಯತೆಯಿದೆ, ಎಚ್ಚರವಹಿಸಿ. ಹಣದ ಒಳಹರಿವು ಉತ್ತಮ. ತಾಯಿಯ ಕಡೆಯಿಂದ ಹೆಚ್ಚಿನ ಅನುಕೂಲ ಒದಗುತ್ತದೆ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಸಾಲದ ಹಣ ಈಗ ವಾಪಸ್ ಬರುತ್ತದೆ. ಕುಟುಂಬದಲ್ಲಿನ ಜಿಜ್ಞಾಸೆಗಳು ಹೋಗಿ ಸಂತೋಷಕರ ವಾತಾವರಣ ಮೂಡುತ್ತದೆ. ವ್ಯವಹಾರದಲ್ಲಿ ಚೇತರಿಕೆ.

ಸಿಂಹ

ಏಕತಾನತೆಯ ಕೆಲಸದ ನಡುವೆಯೂ ಕೆಲಸಗಾರರ ಬೆಂಬಲದಿಂದ ಮನಸ್ಸಿಗೆ ಶಾಂತಿ. ನಿಮ್ಮ ಬುದ್ಧಿಶಕ್ತಿಯಿಂದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುವಿರಿ. ಅಲ್ಪಸ್ವಲ್ಪ ಅಡೆತಡೆ ಇದ್ದರೂ ನೀವಂದುಕೊಂಡ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಬಾಲ್ಯ ಸ್ನೇಹಿತನ ಭೇಟಿಯಾಗಿ ನಿಮಗೆ ಬೇಕಾಗಿದ್ದ ಆಸ್ತಿಯ ದಾಖಲೆಗಳು ದೊರೆಯುವುದು. ಆಸ್ತಿ ಕೊಳ್ಳುವ ವಿಚಾರದಲ್ಲಿ ಸ್ವಲ್ಪ ನಿಧಾನ ಮಾಡಿರಿ. ವಿದೇಶಿ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಿಲ್ಲ.

ಕನ್ಯಾ

ನಿಮ್ಮ ಹೊಸ ಯೋಜನೆಗಳಿಗೆ ಪಾಲುದಾರರು ದೊರೆಯುವರು. ನಿಮ್ಮ ಹಣಕಾಸಿನ ಸ್ಥಿತಿಯನ್ನು ಮುತುವರ್ಜಿಯಿಂದ ಕಾಯ್ದುಕೊಳ್ಳಿರಿ. ಬಂಧುಗಳಲ್ಲಿ ಸಣ್ಣ ಸಣ್ಣ ವಿಚಾರವನ್ನು ದೊಡ್ಡದು ಮಾಡಲು ಹೋಗಬೇಡಿ, ಇದು ನಿಮಗೆ ಮುಳುವಾಗುವುದು. ಉನ್ನತ ಹುದ್ದೆಯಲ್ಲಿರುವರಿಗೆ ಅನುಭವ ಮತ್ತು ಆಡಳಿತ ವೈಖರಿಗೆ ತಕ್ಕಂತೆ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳ ಅಭಿವೃದ್ಧಿ ವಿಚಾರದಲ್ಲಿ ಸ್ವಲ್ಪ ಹಣ ಖರ್ಚಾಗುತ್ತದೆ. ಅತಿಯಾದ ಒತ್ತಡದಿಂದ ದೇಹಕ್ಕೆ ದಣಿವಾಗಬಹುದು, ಸ್ವಲ್ಪ ವಿರಾಮ ಕೊಡಿ.

ತುಲಾ

ಅನಿರೀಕ್ಷಿತ ಪ್ರವಾಸದಲ್ಲಿ ನೀರಿನ ಬಗ್ಗೆ ಎಚ್ಚರದಿಂದಿರಿ. ನಿಮ್ಮ ವಿರೋಧಿಗಳನ್ನು ನಿಯಂತ್ರಿಸಲು ಹೋಗಿ ನೀವೇ ಅವರ ನಿಯಂತ್ರಣಕ್ಕೆ ಒಳಗಾಗುವ ಸಾಧ್ಯತೆ ಇದೆ. ಎಲ್ಲರ ಮನೆಯ ಸಮಸ್ಯೆ ಬಗ್ಗೆ ಮೂಗು ತೋರಿಸುವುದು ಬೇಡ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ರಾಜಕೀಯ ನಾಯಕರು ತಮ್ಮ ಸ್ಥಾನಮಾನಕ್ಕಾಗಿ ಹೆಚ್ಚು ಖರ್ಚು ಮಾಡುವುದು ಬೇಡ. ಚಿನ್ನದ ವ್ಯಾಪಾರಿಗಳಿಗೆ ವಹಿವಾಟು ಹೆಚ್ಚುತ್ತದೆ. ಹೊಸ ಆಸ್ತಿ ಮಾಡುವ ಆಸೆ ಈಡೇರುತ್ತದೆ.

ವೃಶ್ಚಿಕ

ಹಣದ ವಿಚಾರದಲ್ಲಿ ಯಾವುದೇ ರೀತಿಯ ಅಲಕ್ಷ್ಯ ಬೇಡ. ಸಂಗಾತಿಯ ಆದಾಯದಲ್ಲಿ ಏರಿಕೆ ಕಾಣಬಹುದು. ಕೃಷಿಕರ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ. ಹೈನುಗಾರರಿಗೆ ಪ್ರೋತ್ಸಾಹ ಧನದ ಸಾಧ್ಯತೆ ಇದೆ. ಮಕ್ಕಳ ಬಗ್ಗೆ ಶುಭ ಸಮಾಚಾರ ಒದಗಿ ಮನೆಯಲ್ಲಿ ಹರ್ಷದ ವಾತಾವರಣ ಮೂಡುವುದು. ಒಡವೆ ವಸ್ತುಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ನಿಮ್ಮ ಉದ್ಯಮಕ್ಕೆ ಬೇಕಾಗಿದ್ದ ಧನಸಹಾಯ ಅನಿರೀಕ್ಷಿತ ಮೂಲದಿಂದ ಬರುವುದು. ಸ್ನೇಹಿತರಿಗೆ ಸೂಕ್ತ ಕಾಲದಲ್ಲಿ ಸಹಾಯ ಮಾಡಿ ಗೌರವ ಪಡೆಯುವಿರಿ.

ಧನಸ್ಸು

ಹಣದ ಹರಿವು ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಶ್ರಮಪಟ್ಟು ಪಡೆದ ಪದೋನ್ನತಿಯೇ ತಲೆ ಬಿಸಿಗೆ ಕಾರಣವಾಗಬಹುದು, ತಾಳ್ಮೆಯಿಂದ ನಿಭಾಯಿಸಿದಲ್ಲಿ ಎಲ್ಲವೂ ಸರಿಯಾಗುತ್ತದೆ. ರಾಜಕೀಯದವರಿಗೆ ನಿರೀಕ್ಷಿತ ಗುಂಪು ಸಹಾಯ ಮಾಡುತ್ತದೆ. ಹಿರಿಯರು ಮಾತನಾಡುವಾಗ ಅಳೆದು ತೂಗಿ ಮಾತನಾಡಿರಿ. ವಿದ್ಯಾರ್ಥಿಗಳ ಅಭಿಲಾಷೆ ಈಡೇರುವ ಕಾಲ. ಸ್ತ್ರೀ ಮೇಲಧಿಕಾರಿಗಳಿಗೆ ಉತ್ತಮ ಸ್ಥಾನ ಸಿಗುವುದು. ಭೂಮಿಯ ದಾಖಲಾತಿಗಳಲ್ಲಿ ಇದ್ದ ವ್ಯತ್ಯಾಸ ಸರಿಯಾಗಿ ಸಾಲ ಸಿಗುವುದು.

ಮಕರ

ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವರು. ಭೂಮಿಯ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ. ಲೇವಾದೇವಿ ಮಾಡುವುದು ಅಷ್ಟು ಒಳಿತಲ್ಲ. ಬರಬೇಕಾಗಿದ್ದ ಹಣವನ್ನು ತಾಳ್ಮೆಯಿಂದ ವಸೂಲು ಮಾಡಿರಿ. ದೇವತಾ ಕಾರ್ಯಗಳಿಗೆ ದೇಣಿಗೆ ಕೊಡುವಿರಿ. ಕಚೇರಿಯ ಕೆಲಸದಲ್ಲಿ ಉತ್ತಮ ವ್ಯಕ್ತಿಯೆಂದು ಗುರುತಿಸಲ್ಪಡುವಿರಿ. ದ್ರವರೂಪದ ವಸ್ತುಗಳನ್ನು ಮಾರುವವರಿಗೆ ವ್ಯಾಪಾರ ವೃದ್ಧಿ. ಉದ್ಯಮಿಗಳಿಗೆ ಬೇಕಾಗಿದ್ದ ಸೌಲಭ್ಯಗಳು ಅವರ ಬಳಿಗೆ ಬರುತ್ತದೆ.

ಕುಂಭ

ಹೊಸ ವ್ಯಕ್ತಿಗಳು ನಿಮ್ಮೊಡನೆ ವ್ಯವಹಾರ ಮಾಡಲು ಉತ್ಸುಕರಾಗುವರು. ನಿಮ್ಮಲ್ಲಿನ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ. ನಿಮ್ಮ ವಿರುದ್ಧ ನಿಂತಿದ್ದ ಜನರೇ ನಿಮ್ಮ ಸಹಾಯಕ್ಕೆ ಒದಗಿ ಕೆಲಸ ಕಾರ್ಯಗಳು ಪೂರ್ಣವಾಗುವುದು. ವೃತ್ತಿಯಲ್ಲಿರುವವರು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಧನಾದಾಯ ಸಾಮಾನ್ಯ. ನಿಂತಿದ್ದ ವಿದ್ಯಾಭ್ಯಾಸ ಮುಂದುವರಿಸಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿಯಾಗುವಿರಿ.

ಮೀನ

ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಆದಾಯವಿರುತ್ತದೆ. ಮಕ್ಕಳ ಹಠಮಾರಿತನ ನಿಮ್ಮನ್ನು ವಿಚಲಿತರನ್ನಾಗಿ ಮಾಡಬಹುದು. ಎಲ್ಲರ ಬಗ್ಗೆ ಮಾತಾಡಲು ಮುಂದಾಳತ್ವ ಬೇಡ. ಕೋರ್ಟಿನಲ್ಲಿ ನಡೆಯುತ್ತಿರುವ ವ್ಯಾಜ್ಯವನ್ನು ಹೊಂದಾಣಿಕೆಯಿಂದ ಪರಿಹರಿಸಿಕೊಳ್ಳಬಹುದು. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಬಂಧು ಬಾಂಧವರೊಡನೆ ಸಂತೋಷ ಕೂಟಗಳಲ್ಲಿ ಭಾಗವಹಿಸುವಿರಿ. ಅನಾರೋಗ್ಯಕ್ಕೆ ಸ್ವಯಂವೈದ್ಯ ಬೇಡ. ಕಬ್ಬಿಣದ ಕೆಲಸ ಮಾಡುವವರಿಗೆ ಆದಾಯ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT