ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 13-9-2020 ರಿಂದ 19-9-2020 ರವರೆಗೆ

Last Updated 12 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ

ಜ್ಯೋತಿಷ್ಯ ಪದ್ಮಭೂಷಣ

ಸಂಪರ್ಕಕ್ಕೆ 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಸಂಬಂಧವಿಲ್ಲದ ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಈಡುಮಾಡಬಹುದು. ಇಂತಹ ವಿಷಯಗಳಲ್ಲಿ ಅತಿ ಉತ್ಸಾಹದಿಂದ ಮುನ್ನುಗ್ಗುವುದು ಬೇಡ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಮಕ್ಕಳ ವಿದ್ಯಾಭ್ಯಾಸ ಮತ್ತು ನಡವಳಿಕೆಯ ಬಗ್ಗೆ ಗಮನ ಹರಿಸಿ. ಮಹಿಳೆಯರು ನಡೆಸುವ ಉದ್ದಿಮೆಗಳು ಯಶಸ್ಸು ಕಂಡು, ಗಳಿಕೆಯತ್ತ ಮುನ್ನಡೆಯುತ್ತವೆ. ವೃತ್ತಿಯಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಯಶಸ್ಸು ಇದೆ. ರಕ್ತ ಸಂಬಂಧಿ ಕಾಯಿಲೆ ಇರುವವರು ತಪಾಸಣೆ ಮಾಡಿಸಿಕೊಳ್ಳಿ.

**

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ನಿರುದ್ಯೋಗಿಗಳಿಗೆ ಹೊಸ ಬದಲೀ ಆದಾಯದ ಮೂಲಗಳು ಗೋಚರಿಸುತ್ತವೆ, ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ. ಸಾಲ ಕೊಟ್ಟವರು ವಾಪಸಾತಿಗಾಗಿ ಪದೇಪದೇ ಬಂದು ಕಾಡಬಹುದು, ಇವರ ಬಳಿ ಗಲಾಟೆಗೆ ಮುಂದಾಗದೆ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಬ್ಯಾಂಕು ಅಥವಾ ಸರ್ಕಾರಿ ಸಂಸ್ಥೆಗಳಿಂದ ಸಾಲ ಸಿಗುತ್ತದೆ. ಅದನ್ನು ಪಡೆದು ಕಷ್ಟ ಪರಿಹರಿಸಿಕೊಳ್ಳಬಹುದು. ಪತ್ರಕರ್ತರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಇರುತ್ತದೆ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಇದ್ದರೂ ನಂತರ ಸರಿಯಾಗುವುದು. ತಾಯಿಯಿಂದ ಧನ ಸಹಾಯ ಸಿಗಲಿದೆ.

**

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಹೊಸ ವ್ಯವಹಾರದ ಮಾತುಕತೆಗಳಲ್ಲಿ ನಿಮ್ಮ ಪಾಲುದಾರರೊಂದಿಗೆ ಭಾಗವಹಿಸಬೇಕಾಗಬಹುದು, ದ್ವಂದ್ವ ನಿರ್ಧಾರಗಳನ್ನು ಬಿಟ್ಟು ನೇರವಾಗಿ ನಿಮ್ಮ ವಾದ ಪ್ರತಿಪಾದಿಸಿರಿ. ಇದರಿಂದ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ನಿರೀಕ್ಷೆಗೆ ತಕ್ಕ ಧನಾದಾಯ ಇದ್ದೇ ಇರುತ್ತದೆ. ವೃತ್ತಿಯಲ್ಲಿ ಹೊಸ ಹೊಸ ಸಮಸ್ಯೆಗಳು ಎದುರಾಗಬಹುದು, ಈ ಬಗ್ಗೆ ನಿಮ್ಮ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಒಡಹುಟ್ಟಿದವರಿಂದ ನಿರೀಕ್ಷಿತ ಸಹಾಯ ಬರುತ್ತದೆ. ಸ್ಥಿರಾಸ್ತಿಯ ಮಧ್ಯವರ್ತಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಕಮಿಷನ್ ಹಣ ದೊರಕುತ್ತದೆ.

**

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ರಾಜಕಾರಣಿಗಳಿಗೆ ಹೊಸಹೊಸ ಜವಾಬ್ದಾರಿಗಳು ಹೆಗಲೇರುತ್ತವೆ. ಹೊಸ ರೀತಿಯ ಜನಸ್ಪಂದನೆ ಕಾರ್ಯಕ್ರಮಗಳಿಗೆ ಅನುವಾಗ ಬೇಕಾಗುತ್ತದೆ. ನಿಮ್ಮ ಬಂಧುಗಳಲ್ಲಿನ ಭಿನ್ನಾಭಿಪ್ರಾಯ‌ ಬಗೆಹರಿಸಲು ಕರೆ ಬರಬಹುದು, ಇದರಲ್ಲಿ ಭಾಗವಹಿಸಿದರೆ ನಿಮ್ಮ ಇತರ ಬಂಧುಗಳು ನಿಮ್ಮಿಂದ ದೂರವಾಗಬಹುದು. ಆಲೋಚಿಸಿ ನಡೆಯಿರಿ. ಉದ್ಯೋಗ ಅರಸುತ್ತಿರುವವರು ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ಸಂಗಾತಿಯ ಸಲಹೆ ಮತ್ತು ಸಹಕಾರ ಉತ್ತಮ ಪರಿಣಾಮ ಬೀರುತ್ತದೆ. ಅಗತ್ಯಕ್ಕೆ ತಕ್ಕಂತೆ ಧನದ ಒಳಹರಿವು ಇರುತ್ತದೆ.

**

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಅತಿಯಾದ ಆತ್ಮಾಭಿಮಾನ ಬಿಡಿ. ಜನರೊಂದಿಗೆ ಹೊಂದಿಕೊಳ್ಳುವುದು ಉತ್ತಮ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಗಳು ಸಿಗುವ ಸಾಧ್ಯತೆಗಳು ಹೆಚ್ಚಿವೆ. ಸಹೋದ್ಯೋಗಿಗಳ ಮೇಲೆ ಸಂಶಯ ಸರಿಯಲ್ಲ. ಇದರಿಂದ ನಿಮ್ಮ ಕೆಲಸಕಾರ್ಯಗಳಿಗೆಹಿನ್ನಡೆ. ನಿಮ್ಮ ಕೆಲವೊಂದು ವ್ಯವಹಾರಗಳಲ್ಲಿ ಆದಾಯ ಬರುತ್ತದೆ. ನ್ಯಾಯಾಲಯಗಳಲ್ಲಿ ಯಶಸ್ಸುನಿಮ್ಮ ಪರ ಇರುತ್ತದೆ. ಮಕ್ಕಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಮೂಳೆ ತೊಂದರೆ ಇರುವವರು ಉಪೇಕ್ಷೆ ಮಾಡಬೇಡಿ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿಯು ದೊರೆಯುವ ಲಕ್ಷಣಗಳಿವೆ.

**

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ದೈನಂದಿನ ಕೆಲಸಗಳಲ್ಲಿ ಹೆಚ್ಚಿನ ಉತ್ಸಾಹ ತೋರುವಿರಿ. ಸ್ನೇಹಿತರಿಂದ ಮೋಸಹೋಗುವ ಸಾಧ್ಯತೆ ಇದೆ. ಅಪರಿಚಿತರೊಡನೆ ಹಣದ ವ್ಯವಹಾರ ಮಾಡುವಾಗ ಎಚ್ಚರವಿರಲಿ. ನವೀನ ರೀತಿಯ ವೈದ್ಯಕೀಯ ವಸ್ತ್ರಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಲಿದೆ. ಅವಿವಾಹಿತರಿಗೆ ಸಂಬಂಧಗಳು ಒದಗಿಬರುವ ಸಾಧ್ಯತೆಗಳಿವೆ. ತಾಯಿ ಮತ್ತು ಮಕ್ಕಳ ಆಲೋಚನೆಗಳು ಬೇರೆಯಾಗಿ ವಾದಗಳು ನಡೆಯುವ ಸಾಧ್ಯತೆಯಿದೆ. ಸ್ತ್ರೀಯರ ಮುಖ ಅಥವಾ ಕೇಶ ಅಲಂಕಾರ ಮಾಡುವವರಿಗೆ ವ್ಯವಹಾರ ಹೆಚ್ಚುತ್ತದೆ. ಸರ್ಕಾರಿ ಕೆಲಸಗಳಲ್ಲಿ ಅಲ್ಪ ಹಿನ್ನಡೆ ಇರುತ್ತದೆ.

**

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸಹೋದ್ಯೋಗಿಗಳೊಡನೆ ನೇರವಾಗಿ ಮಾತನಾಡಿ ಇದ್ದ ವೈಮನಸ್ಯವನ್ನು ದೂರ ಮಾಡಿಕೊಳ್ಳಬಹುದು. ಆಸ್ತಿ ವಿವಾದಗಳನ್ನು ಈಗ ಪರಿಹರಿಸಿಕೊಳ್ಳಬಹುದು. ಉದ್ದಿಮೆದಾರರು ಯಂತ್ರೋಪಕರಣಗಳ ದುರಸ್ತಿಗಾಗಿ ಗಮನ ಹರಿಸಬೇಕಾಗಬಹುದು. ಹಿರಿಯ ಪಾಲುದಾರರ ಸಹಾಯದಿಂದ ವ್ಯಾಪಾರದಲ್ಲಿ ಅಭಿವೃದ್ಧಿ ಇದೆ. ಸಂಬಾರ ಪದಾರ್ಥಗಳನ್ನು ಮಾರುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ. ಸರ್ಕಾರಿ ಕಚೇರಿಗಳಲ್ಲಿ ಆಗಬೇಕಾದ ಕೆಲಸಗಳಲ್ಲಿ ಯಶಸ್ಸು ಇರುತ್ತದೆ. ನೀವು ನಂಬಿರುವ ನಾಯಕರು ನಿಮಗೆ ಕೈ ಕೊಡಬಹುದು ಎಚ್ಚರ. ನಿರೀಕ್ಷಿತ ಸರ್ಕಾರದ ಸಹಾಯಧನಗಳು ಬರುತ್ತವೆ.

**

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಕೆಲಸ ಮಾಡಿಕೊಡುವಂತೆ ರಾಜಕೀಯ ವ್ಯಕ್ತಿಗಳು ಒತ್ತಡ ಹೇರಬಹುದು. ಕೆಲವರು ಅತಿಯಾದ ಸ್ನೇಹ ಬೆಳೆಸಿ ಅದನ್ನು ವ್ಯವಹಾರಕ್ಕೆ ಬಳಸಿಕೊಳ್ಳುವವರು, ಇವರ ಬಳಿ ನಿಮ್ಮ ಜೀವನದ ಒಳಗುಟ್ಟು ಹೇಳಬೇಡಿ. ಹಣದ ಒಳಹರಿವಿನಲ್ಲಿ ಸುಧಾರಣೆ ಕಾಣಬಹುದು. ಎದುರಾಳಿಗಳು ನಿಮ್ಮ ವಿರುದ್ಧ ಹೂಡುವ ತಂತ್ರಗಳು ನಿಮಗೆ ಗೊತ್ತಾಗುತ್ತದೆ, ಇದರಿಂದ ನೀವು ತಂತ್ರಗಳನ್ನು ರೂಪಿಸಲು ಅನುಕೂಲ ಆಗುತ್ತದೆ. ಸ್ತ್ರೀಯರಿಗೆ ವೃತ್ತಿಯಲ್ಲಿ ಏಳಿಗೆ. ಹಿರಿಯರ ಒಡವೆಗಳು ಅನಿರೀಕ್ಷಿತವಾಗಿ ನಿಮಗೆ ಬಳುವಳಿಯಾಗಿ ಬರಬಹುದು.

**

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಪ್ರವಚನ ಮಾಡುವವರಿಗೆ ಹೆಚ್ಚಿನ ಗೌರವಾದರಗಳು ದೊರೆಯುತ್ತವೆ. ಸಂಗೀತ ಶಿಕ್ಷಕರಿಗೆ ಹೆಚ್ಚಿನ ಶಿಷ್ಯರು ದೊರೆತು ಸಂಪಾದನೆ ಹೆಚ್ಚಲಿದೆ. ಸಾಂಪ್ರದಾಯಿಕ ವೈದ್ಯರಿಗೆ ಬೇಡಿಕೆ ಹೆಚ್ಚಾಗಿ ಉತ್ತಮ ಹೆಸರು ಬರುತ್ತದೆ. ವೃತ್ತಿಯಲ್ಲಿ ಇಷ್ಟವಾದ ಕಾರ್ಯಕ್ಷೇತ್ರ ಹೊಂದುವ ಯೋಗವಿದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಮಾಡಿದ್ದ ಪಿತೂರಿಗಳು ನಿಷ್ಪಲವಾಗಿ ನಿಮಗೆ ಯಶಸ್ಸು ಇರುತ್ತದೆ. ಹಣದ ಹರಿವು ಕಡಿಮೆ ಇದ್ದರೂ ತೊಂದರೆ ಏನಿಲ್ಲ. ವಿವಾಹ ಆಕಾಂಕ್ಷೆ ಹೊಂದಿರುವವರಿಗೆ ಶುಭ ಸಮಾಚಾರಗಳು ದೊರೆಯುತ್ತವೆ. ತಂದೆಯ ಸಹಕಾರ ಸಾಕಷ್ಟು ದೊರೆತು ನಿಮಗೆ ನೆಮ್ಮದಿಯಾಗುತ್ತದೆ.

**

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಕೆಲಸದಲ್ಲಿ ಅತ್ಯಂತ ಶ್ರದ್ಧೆ ತೋರಿಸುವಿರಿ. ನಿಮಗೆ ಹೊಸ ಮತ್ತು ಕ್ಲಿಷ್ಟಕರ ಕೆಲಸ ವಹಿಸಿದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಿ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಕೃಷಿಕರಿಗೆ ಬೇಕಾದ ಉತ್ತಮ ಬೀಜಗಳು ಮತ್ತು ಕೃಷಿಸಲಕರಣೆಗಳು ದೊರೆಯುತ್ತವೆ. ಸಂಗಾತಿಯಿಂದ ಆರ್ಥಿಕ ಸಹಾಯ ನಿರೀಕ್ಷಿಸಬಹುದು. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ತಂದೆಯ ವ್ಯವಹಾರಗಳಲ್ಲಿ ನಿಮಗೆ ಪಾಲ್ಗೊಳ್ಳುವ ಅವಕಾಶ ಸಿಕ್ಕು ಅದರ ಬಗ್ಗೆ ಸಾಕಷ್ಟು ತಿಳಿಯಬಹುದು. ಕೃಷಿ ಉತ್ಪಾದನೆಗಳ ಸಗಟು ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸಿ ಸಂಪಾದನೆ ಹೆಚ್ಚುತ್ತದೆ.

**

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ನಿಮ್ಮ ದೈನಂದಿನ ಕೆಲಸಗಳಲ್ಲಿ ಉತ್ತಮ ಪ್ರಗತಿ ಕಾಣಬಹುದು. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಹೊಸ ಬೆಳವಣಿಗೆ ಕಂಡು ನಿಮಗೆ ಆಶ್ಚರ್ಯವಾಗಬಹುದು. ಈ ರಾಶಿಯ ಮಕ್ಕಳಿಂದ ಹಿರಿಯರಿಗೆ ಅಸಂತೋಷವಾಗಬಹುದು. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಇರುತ್ತದೆ. ನವೀನ ರೀತಿಯ ಆಭರಣಗಳನ್ನು ತಯಾರಿಸುವವರಿಗೆ ಉತ್ತಮ ಬೇಡಿಕೆ ಇರುತ್ತದೆ. ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಬಾಕಿ ವಸೂಲಿ ಆರಂಭವಾಗುತ್ತದೆ. ತಾಯಿಯೊಂದಿಗೆ ಸಂಬಂಧ ಸುಧಾರಿಸಿ ಧನ ಸಹಾಯ ಸಿಗುತ್ತದೆ.

**

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮುನ್ನಡೆ. ಆಸಕ್ತಿಯ ವಿಷಯಗಳಲ್ಲಿ ಅಭ್ಯಾಸ ಮಾಡಲು ಅವಕಾಶ ದೊರೆಯುತ್ತದೆ. ಗೆಳೆಯರ ಸಕಾಲಿಕ ಎಚ್ಚರಿಕೆಯಿಂದ ಎದುರಾಗಲಿದ್ದ ನಷ್ಟದಿಂದ ಪಾರಾಗುವಿರಿ. ಹೊಸ ಯೋಜನೆಯೊಂದನ್ನು ಆರಂಭಿಸುವಿರಿ. ಇದಕ್ಕೆ ಸಾಕಷ್ಟು ಹಿರಿಯರ ಮಾರ್ಗದರ್ಶನ ಮತ್ತು ಸಹಕಾರಗಳು ದೊರೆತು ಅನುಕೂಲವಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆದಾಯ ನಿರೀಕ್ಷಿಸಬಹುದು. ಉದ್ಯೋಗ ಸ್ಥಳದಲ್ಲಿ ಬಿಡುವಿಲ್ಲದ ಕೆಲಸವಿರುತ್ತದೆ. ಚರ್ಮದ ಕರಕುಶಲ ವಸ್ತುಗಳನ್ನು ತಯಾರಿಸುವವರಿಗೆ ಉತ್ತಮ ಬೇಡಿಕೆ ಬರುತ್ತದೆ ಮತ್ತು ಆದಾಯ ಸಹ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT