ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 28-11-2021ರಿಂದ 4-12-2021ರ ವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವವರಿಗೆ ಈಗ ಒಳ್ಳೆಯ ಕಾಲ. ಅನಿರೀಕ್ಷಿತ ಅವಕಾಶಗಳು ಒದಗಿಬರುತ್ತವೆ. ಇದುವರೆಗೆ ಇದ್ದ ಆರ್ಥಿಕ ಹಿನ್ನಡೆ ಈಗ ಪರಿಹಾರವಾಗಿ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ. ಮನೆಯಲ್ಲಿದ್ದ ಭಿನ್ನಾಭಿಪ್ರಾಯಗಳು ದೂರವಾಗಿ ವಾತಾವರಣ ತಿಳಿಯಾಗುತ್ತದೆ. ಸ್ವಲ್ಪ ಆರೋಗ್ಯ ವ್ಯತ್ಯಾಸದಿಂದ ಮನಸ್ಸಿಗೆ ದುಗುಡವಾಗಬಹುದು. ಬೇರೆಯವರೊಂದಿಗೆ ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಲಿ. ಲೇವಾದೇವಿಯ ವ್ಯವಹಾರ ಖಂಡಿತಾ ಬೇಡ. ಸಂಗಾತಿಯ ಹೆಸರಲ್ಲಿ ಸ್ಥಿರಾಸ್ತಿಯನ್ನು ಮಾಡಬಹುದು. ವಿದೇಶಿ ಹಣ ವಿನಿಮಯ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಉಪಾಧ್ಯಾಯರಿಗೆ ಉತ್ತಮ ಗೌರವವಿದೆ.

***

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ನಿಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಕಾಣಬಹುದು. ಆದಾಗ್ಯೂ ಉನ್ನತಿ ನಿಮ್ಮ ಪಾಲಿಗೆ ಒದಗಿಬರಲಿದೆ. ಬಹಳ ದಿನಗಳಿಂದ ಬರುವುದಿಲ್ಲವೆಂದುಕೊಂಡಿದ್ದ ಹಣ ವಾಪಸ್ಸು ಬಂದು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಲಿ. ಮೋಸ ಹೋಗುವ ಸಂದರ್ಭಗಳು ಎದ್ದುಕಾಣುತ್ತವೆ. ಬಂಧುಗಳ ಸಹಕಾರ ನಿಮಗೆ ದೊರೆಯುತ್ತದೆ. ಸಂಯಮದಿಂದ ಮಾತನಾಡಿ ಕೆಲಸಕಾರ್ಯಗಳನ್ನು ಸಾಧಿಸಿಕೊಳ್ಳಬಹುದು. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಸಹೋದ್ಯೋಗಿಗಳ ಒಳಸಂಚಿನಿಂದಾಗಿ ಅವಮಾನವಾಗಬಹುದು. ಸ್ವಲ್ಪ ಎಚ್ಚರವಾಗಿರಿ. ಸರ್ಕಾರಿ ಮಟ್ಟದ ಕೆಲಸಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ನಿಮ್ಮ ಕಾರ್ಯ ಮತ್ತು ಅನುಭವದ ಕ್ಷಮತೆಯಿಂದಾಗಿ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಅವುಗಳ ಸಾಧಕ-ಬಾಧಕಗಳನ್ನು ತೂಗಿ ನೋಡಿ ಅನುಸರಿಸಿರಿ. ಸಮಾಜದಲ್ಲಿ ನಿಮ್ಮ ಶ್ರಮದ ಫಲವನ್ನು ಬೇರೆಯವರು ಬಳಸಿಕೊಳ್ಳಬಹುದು. ಈ ಬಗ್ಗೆ ನಿಗಾ ವಹಿಸಿರಿ. ಮಹಿಳಾ ರಾಜಕಾರಣಿಗಳಿಗೆ ಪ್ರಮುಖ ಹುದ್ದೆಗಳು ಸಿಗುವ ಸಂದರ್ಭವಿದೆ. ಸಂಗಾತಿಯಿಂದ ಆರ್ಥಿಕ ನೆರವು ದೊರೆಯುತ್ತದೆ. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ಸ್ವಲ್ಪ ಪ್ರಗತಿ ಇದೆ. ಕೆಲಸಕಾರ್ಯಗಳಲ್ಲಿ ನಿಮ್ಮ ಮುಂದಾಳತ್ವವನ್ನು ಎಲ್ಲರೂ ಹೊಗಳುವರು. ಕುಟುಂಬ ವಿಚಾರಗಳನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುವುದು ಬಹಳ ಉತ್ತಮ. ಹಣದ ಒಳಹರಿವು ಸ್ವಲ್ಪ ಉತ್ತಮವಾಗಿ ಇರುತ್ತದೆ. ಸ್ವಂತ ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ.

***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ನಿಮ್ಮ ಕೆಲವು ಕನಸುಗಳಿಗೆ ರೆಕ್ಕೆಪುಕ್ಕ ಬಂದು ಸಂತಸವಾಗುತ್ತದೆ. ಹಣಕಾಸಿನ ಸ್ಥಿತಿ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಆಸ್ತಿ ಖರೀದಿ ಮಾಡುವ ಯೋಗವಿದೆ. ಕೆಲವು ಹಿರಿಯ ಅಧಿಕಾರಿಗಳು ತಮ್ಮ ಮೇಲಿನ ಆಪಾದನೆಯಿಂದ ಮುಕ್ತರಾಗಿ ಹೊಸ ಜೀವನವನ್ನು ಪ್ರಾರಂಭಿಸುವ ಲಕ್ಷಣಗಳಿವೆ. ಕ್ರೀಡಾಪಟುಗಳಿಗೆ ಅವಕಾಶಗಳು ಹೆಚ್ಚಾಗಿ ಪ್ರಸಿದ್ಧಿಗೆ ಬರುವ ಸಾಧ್ಯತೆ ಇದೆ. ಆಹಾರ ದೋಷದಿಂದ ಉದರಸಂಬಂಧಿ ಕಾಯಿಲೆಗಳು ಬರಬಹುದು. ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಕೆಲವರಿಗೆ ಅವರ ಕಾರ್ಯ ಕೌಶಲ್ಯಕ್ಕೆ ತಕ್ಕಂತೆ ಪ್ರೋತ್ಸಾಹ ಭತ್ಯೆ ಸಿಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಬೇಕಾದ ಸೌಕರ್ಯಗಳು ದೊರೆಯುತ್ತವೆ. ಕೃಷಿಭೂಮಿಯನ್ನು ಕೊಳ್ಳುವ ಯೋಗವು ಕಾಣುತ್ತಿದೆ.

***

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ನಿಮ್ಮ ನಡೆನುಡಿಗಳಿಂದ ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಗೌರವ ಪಡೆಯುವಿರಿ. ಬೇರೆಯವರ ಸಲಹೆಗಳನ್ನು ಒಪ್ಪಿಕೊಳ್ಳುವುದಕ್ಕೆ ಮುನ್ನ ಪರಿಶೀಲನೆ ಮಾಡುವುದು ಅಗತ್ಯ. ವಿವಾಹ ಆಕಾಂಕ್ಷೆಗಳಿಗೆ ಪುಷ್ಟಿ ದೊರೆತು ಸಂಬಂಧ ಕೂಡಿಬರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ವೈದ್ಯ ವೃತ್ತಿಯಲ್ಲಿರುವವರಿಗೆ ಉತ್ತಮ ವ್ಯವಹಾರಗಳು ನಡೆದು ಆದಾಯವು ಸಹ ಹೆಚ್ಚುತ್ತದೆ. ಬಂಧುಗಳ ನಡುವೆ ಅತಿಯಾದ ಮಾತು ಬೆಳೆದು ವೈಮನಸ್ಯ ತಲೆದೋರಬಹುದು. ವಿದ್ಯಾರ್ಥಿಗಳಿಗೆ ಅವರ ಅಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಕಾರ್ಯ ಕ್ಷೇತ್ರದಲ್ಲಿ ಬಹಳ ಒತ್ತಡಗಳಿದ್ದರೂ ಪೂರ್ವಯೋಜಿತ ಕ್ರಮದಂತೆ ಕೆಲಸಗಳನ್ನು ಸಾಧಿಸುವಿರಿ. ಸಂಗಾತಿಯೊಂದಿಗೆ ನಿಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಿರಿ.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ಅತಿಯಾದ ಆತುರ ಬೇಡ. ಸಂಗಾತಿಗೆ ಪಿತ್ರಾರ್ಜಿತ ಆಸ್ತಿ ಒದಗಿಬರುವ ಸಾಧ್ಯತೆಗಳಿವೆ. ಎಲ್ಲರೊಡನೆ ವ್ಯವಹರಿಸುವಾಗ ಸಮಾಧಾನದಿಂದ ಇರುವುದು ಒಳ್ಳೆಯದು. ದೂರ ಪ್ರಯಾಣ ಮಾಡಿದ ಸುಖ ಅನುಭವ ನಿಮ್ಮದಾಗುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಆತಂಕ ಎದುರಾಗಬಹುದು. ಧಾರ್ಮಿಕ ಆಚರಣೆಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಮಹತ್ವದ ವಿಷಯಗಳಲ್ಲಿ ಸ್ವಂತ ನಿರ್ಧಾರವನ್ನು ಕೈಗೊಳ್ಳುವುದು ಉತ್ತಮ. ಹಲ್ಲು ನೋವು ನಿಮ್ಮನ್ನು ಭಾಧಿಸಬಹುದು. ಹೆಣ್ಣು ಮಕ್ಕಳು ನಡೆಸುವ ವ್ಯವಹಾರಗಳಲ್ಲಿ ಪ್ರಗತಿ ಇರುತ್ತದೆ. ನಿರುದ್ಯೋಗಿಗಳಿಗೆ ಅವರ ಪರಿಚಯಸ್ಥರ ಮೂಲಕ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ವಿದೇಶದಲ್ಲಿರುವವರು ಅವರ ದಾಖಲೆಗಳ ಬಗ್ಗೆ ಹೊಂದಿದ್ದ ಅನುಮಾನಗಳು ಬಗೆಹರಿಯುತ್ತವೆ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ನಿರುದ್ಯೋಗಿಗಳಿಗೆ ಅವರ ಹಿಂದಿನ ಉದ್ಯೋಗದಾತರಿಂದ ಕರೆ ಬಂದು ಪುನಃ ಕೆಲಸ ಸಿಗುತ್ತದೆ. ಉದ್ಯೋಗದಾತರ ಜೊತೆ ಇದ್ದಂತಹ ಸಂಬಂಧ ಇದಕ್ಕೆ ಕಾರಣವಾಗುತ್ತದೆ. ನೀವು ಆರಂಭಿಸಬೇಕೆಂದು ಇರುವ ಯೋಜನೆಗಳ ಬಗ್ಗೆ ಕುಟುಂಬದವರೊಡನೆ ಮತ್ತು ತಜ್ಞರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಬಹಳ ಉತ್ತಮ. ಹೊಸ ವಾಹನದ ಖರೀದಿ ಸಾಧ್ಯತೆ ಕಂಡುಬರುತ್ತಿದೆ. ಈಗ ನಿಮ್ಮದೇ ಮನೆ ನಿರ್ಮಾಣದ ಬಗ್ಗೆ ಸಾಕಷ್ಟು ಚಿಂತನೆ ನಡೆಸುವಿರಿ. ಸಾಮಾಜಿಕ ಪರಿಸ್ಥಿತಿಗಳು ನಿಮ್ಮ ವಿರುದ್ಧವಾಗಿರುವುದರಿಂದ ಸಾಮಾಜಿಕವಾಗಿ ಹೇಳಿಕೆಗಳನ್ನು ಕೊಡುವಾಗ ಎಚ್ಚರ ಇರಲಿ. ನಿಮ್ಮ ಮಕ್ಕಳ ನಡೆನುಡಿಯಿಂದ ತಲೆತಗ್ಗಿಸುವ ಸಂದರ್ಭಬರಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಬೇರೆಯವರ ಬಗ್ಗೆ ಹಗುರ ಮಾತು ಬೇಡ.

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಒತ್ತಡದ ಜೀವನದಿಂದ ಹೊರಬಂದು ಸಂತೋಷಪಡುವಿರಿ. ಬಾಲ್ಯ ಸ್ನೇಹಿತನ ಅನಿರೀಕ್ಷಿತ ಆಗಮನದಿಂದ ಖುಷಿಯಾಗುವಿರಿ. ಬೇರೆಯವರ ವ್ಯವಹಾರದಲ್ಲಿ ಭಾಗಿಯಾಗಲು ಹೋಗಿ ಮೋಸ ಹೋಗುವ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದಲ್ಲಿ ಎಚ್ಚರವಹಿಸುವುದು ಬಹಳ ಅಗತ್ಯ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅನ್ಯರು ಹಸ್ತಕ್ಷೇಪ ಮಾಡಲು ಎಂದಿಗೂ ಅವಕಾಶ ಕೊಡಬೇಡಿ. ಆರ್ಥಿಕರಂಗದಲ್ಲಿ ಚೇತರಿಕೆಯ ಹಾದಿಯನ್ನು ಕಾಣುವಿರಿ. ಸಾಮಾಜಿಕ ಕಾರ್ಯಗಳತ್ತ ಮನಸ್ಸು ಹರಿಯುತ್ತದೆ. ಅಧ್ಯಯನಶೀಲರಿಗೆ ಅವರ ಕಾರ್ಯಕ್ಕೆ ತಕ್ಕ ಯಶಸ್ಸಿನ ಗರಿ ದೊರೆಯುತ್ತದೆ. ಅಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಮಾರ್ಗದರ್ಶಕರು ದೊರೆಯುತ್ತಾರೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

***

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ಬಂಡವಾಳ ಹೂಡಿಕೆಗೆ ಆಲೋಚಿಸುತ್ತಿದ್ದ ನಿಮಗೆ ಈಗ ಕಾಲಕೂಡಿ ಬರುತ್ತದೆ. ನಿಮ್ಮ ನಿರೀಕ್ಷೆಯಷ್ಟು ಆದಾಯ ಹರಿದುಬರುತ್ತದೆ. ಚಿನ್ನ, ಬೆಳ್ಳಿ ವ್ಯಾಪಾರಸ್ಥರು ಹೊಸ ಶಾಖೆಗಳನ್ನು ತೆರೆಯಬಹುದು. ಹೊಸದಾಗಿದೆ ಕೆಲಸಕ್ಕೆ ಸೇರಿದವರಿಗೆ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ದೊರೆತು ಕೆಲಸ ಹಗುರವೆನಿಸುತ್ತದೆ. ಕ್ಷಿಪ್ರ ವ್ಯವಹಾರಗಳು ಹೆಚ್ಚು ಫಲವನ್ನು ಕೊಡುತ್ತದೆ. ನಿಮ್ಮ ಮಾತು ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಎಲ್ಲರನ್ನೂ ಆಕರ್ಷಿಸುವಿರಿ. ಯೋಜನೆಗಳಲ್ಲಿ ನಿಮ್ಮ ನಿರ್ಧಾರ ಫಲಪ್ರದವಾಗಿ ಎಲ್ಲರ ಗಮನ ಸೆಳೆಯುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಸ್ಥಿರಾಸ್ತಿ ಮೇಲೆ ಹೂಡಿದ ಮೌಲ್ಯಗಳು ಬಹಳ ಹೆಚ್ಚಾಗುತ್ತವೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣಧನಿಷ್ಠ 1.2)

ವಿಪರೀತ ಕೆಲಸದ ಒತ್ತಡದ ನಡುವೆಯೂ ಮಾನಸಿಕ ಸ್ಥಿರತೆಯು ನಿಮ್ಮದಾಗಲಿದೆ. ಸಹವರ್ತಿಗಳಲ್ಲಿ ಉತ್ಸಾಹವನ್ನು ತುಂಬಿ ಕೆಲಸ ಮಾಡಿಸುವಿರಿ. ಆಸ್ತಿ ಖರೀದಿ ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ವ್ಯವಹಾರ ವಿಸ್ತರಣೆಗಾಗಿ ದೂರ ಪ್ರಯಾಣದ ಸಾಧ್ಯತೆಗಳಿವೆ. ಯಾವುದೇ ಮುಲಾಜಿಗೆ ಒಳಗಾಗದೆ ವ್ಯವಹಾರ ನಡೆಸುವುದರಿಂದ ನಿಮ್ಮ ವ್ಯವಹಾರ ಅಭಿವೃದ್ಧಿಯಾಗುತ್ತದೆ. ಧನದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪುತ್ತದೆ. ಹೊಸ ಪಾಲುದಾರಿಕೆ ವ್ಯವಹಾರಗಳಿಗೆ ಆಹ್ವಾನ ಬರುತ್ತದೆ. ಕೆಲವು ವಿದ್ಯಾರ್ಥಿಗಳಿಗೆ ಸಹಪಾಠಿಗಳಿಂದ ತಗಾದೆ ಬರಬಹುದು. ವಿದೇಶದಲ್ಲಿ ಕೆಲಸ ಅರಸುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಣೆಯ ಸಾಧ್ಯತೆಗಳಿವೆ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ನಿಮ್ಮ ಸಂಗಾತಿಯಿಂದ ಉತ್ತಮ ಆರ್ಥಿಕ ಸಹಕಾರ ದೊರೆಯುತ್ತದೆ. ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಬಡ್ಡಿ ವ್ಯವಹಾರವನ್ನು ಮಾಡುವವರಿಗೆ ಹಿನ್ನಡೆ ಇರುತ್ತದೆ. ವಿದ್ಯಾರ್ಥಿಗಳಿಗೆ ಬೇಕಾದ ಮಾರ್ಗದರ್ಶನ ಖಂಡಿತ ದೊರೆಯುತ್ತದೆ. ಕಾವ್ಯ ಬರಹಗಾರರಿಗೆ ಉತ್ತಮ ಪ್ರೋತ್ಸಾಹ ದೊರೆತು ಅವರ ಬರಹಗಳು ಪ್ರಕಟಗೊಳ್ಳುತ್ತವೆ. ಸಾಮಾಜಿಕ ಕಾರ್ಯಗಳನ್ನು ಮಾಡುವವರಿಗೆ ಉತ್ತಮ ಜನಬೆಂಬಲ ದೊರೆತು ಸಾಕಷ್ಟು ಕಾರ್ಯಗಳನ್ನು ಸಾಧಿಸಬಹುದು. ಹಿರಿಯರನ್ನು ಗುರುತಿಸಿ ಗೌರವಿಸುತ್ತಾರೆ. ಬೆಳ್ಳಿಯ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತದೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಹಿರಿಯರಿಂದ ಬರುವ ಸಲಹೆಗಳು ನಿಮಗೆ ಸಾಕಷ್ಟು ಅನುಕೂಲ ಮಾಡುತ್ತವೆ. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯದಿಂದ ಕಾರ್ಯಸಾಧನೆ ಆಗುವುದು. ಗೃಹ ನಿರ್ಮಾಣ ಮಾಡುವವರಿಗೆ ಬೇಡಿಕೆ ಬರುತ್ತದೆ. ವಸ್ತ್ರವಿನ್ಯಾಸಕಾರರ ವ್ಯವಹಾರದಲ್ಲಿ ವಿಸ್ತರಣೆಯಾಗುತ್ತದೆ. ಗೃಹಾಲಂಕಾರ ವಸ್ತುಗಳನ್ನು ತಯಾರಿಸುವವರಿಗೆ ಹೆಚ್ಚಿನ ಆದೇಶಗಳು ದೊರೆತು ಸಂತಸವಾಗುತ್ತದೆ. ನೆಚ್ಚಿನ ಒಡವೆಗಳನ್ನು ಕೊಳ್ಳುವ ಅವಕಾಶವಿದೆ. ಔಷಧಿ ಪೂರೈಕೆದಾರರಿಗೆ ಹೊಸ ಹೊಸ ವ್ಯಾಪಾರ ವಿಸ್ತರಣೆ ಆಗುವ ಸಂದರ್ಭವಿದೆ. ಕಬ್ಬಿಣದ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ವ್ಯಾಪಾರವಿರಲಿದೆ. ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ ಹೆಚ್ಚಾಗಿ ಅವರ ಸರಕುಗಳು ಹೆಚ್ಚು ಮಾರಾಟವಾಗುತ್ತವೆ. ಶೀತ ಬಾಧೆ ಕಾಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT