ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 03-01-2021ರಿಂದ 09-01-2021 ರವರೆಗೆ

ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ,ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕಕ್ಕೆ
8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಆಸ್ತಿಯ ಬಗ್ಗೆ ಕಠಿಣ ಮಾತುಗಳು ನಡೆದು ಬಂಧುಗಳ ನಡುವೆ ವಿರಸಕ್ಕೆ ಕಾರಣವಾಗಬಹುದು. ಮಿತ್ರರ ಸಹಾಯದಿಂದ ಕೆಲವು ಕೆಲಸಗಳು ಕೈಗೂಡುತ್ತವೆ. ಮಾತನಾಡುವಾಗ ಉಡಾಫೆಯ ಮಾತುಗಳು ಬೇಡ, ಉಡಾಫೆಯ ಮಾತುಗಳು ನಿಮಗೆ ಹಿನ್ನಡೆ ತರುತ್ತವೆ. ಆಲಂಕಾರಿಕ ವಸ್ತುಗಳಿಗಾಗಿ ಹಣ ಖರ್ಚು ಮಾಡುವಿರಿ. ನಿಮ್ಮ ಆಂತರಿಕ ವಿಷಯದಲ್ಲಿ ಆತ್ಮೀಯರು ಸಾಂತ್ವನದ ಮಾತುಗಳನ್ನು ಹೇಳಿ ಪರಿಹಾರ ಸೂಚಿಸುವರು. ಶೀತ ಬಾಧೆ ಸ್ವಲ್ಪ ಕಾಣಿಸಬಹುದು. ಪ್ರೇಮಿಗಳಿಗಾಗಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ವೃತ್ತಿಯಲ್ಲಿ ಇದ್ದ ಗೊಂದಲಗಳು ಪರಿಹಾರವಾಗಿ ಒಂದು ರೀತಿಯಲ್ಲಿ ನೆಮ್ಮದಿಯ ವಾತಾವರಣ ಮೂಡುವುದು.

ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಹಣಕಾಸಿನ ಸ್ಥಿತಿಯು ಸುಧಾರಣೆಯತ್ತ ಸಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹೊಸ ಆಶಾಕಿರಣ ಗೋಚರಿಸುತ್ತದೆ. ಆರೋಗ್ಯದ ಸಣ್ಣಪುಟ್ಟ ಸಮಸ್ಯೆಗಳು ಕಂಡುಬಂದರೂ ಅಂತಹ ಕಷ್ಟವೇನು ಇರುವುದಿಲ್ಲ. ಯಾವುದೇ ರೀತಿಯ ಆಯುಧಗಳನ್ನು ಬಳಸುವಾಗ ಬಹಳ ಎಚ್ಚರ ವಹಿಸಿರಿ. ಮನೆಯವರೊಂದಿಗೆ ವ್ಯವಹರಿಸುವಾಗ ಸ್ವಲ್ಪ ನಿಗಾ ಇರಲಿ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ. ಹಿರಿಯರ ಆಸ್ತಿ ನಿಮಗೆ ಒದಗುವ ಸಂದರ್ಭಗಳಿವೆ. ಕೃಷಿಕರಿಗೆ ಆದಾಯದಲ್ಲಿ ಕೊಂಚ ಕಡಿಮೆಯಾಗಬಹುದು. ಆದರೆ, ನಷ್ಟವೇನಿಲ್ಲ. ಮಹಿಳಾ ರಾಜಕಾರಣಿಗಳಿಗೆ ಪ್ರಗತಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಸರಾಗವಾಗಿ ನಡೆಯುತ್ತಿದ್ದ ಕೆಲಸಗಳಲ್ಲಿ ಸ್ವಲ್ಪ ಹಿಂಜರಿಕೆ ಕಾಣಬಹುದು, ಆದರೂ ಕೆಲಸಗಳು ನಿಲ್ಲುವುದಿಲ್ಲ. ಅಗತ್ಯಕ್ಕೆ ತಕ್ಕಷ್ಟು ಧನಾದಾಯ ಇರಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ವೃತ್ತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮುಂಚೆ ಸರಿಯಾಗಿ ಆಲೋಚಿಸಿ. ತಾಮ್ರ ಹಿತ್ತಾಳೆ ಮುಂತಾದ ಲೋಹಗಳ ಮಾರಾಟಗಾರರಿಗೆ ಬೇಡಿಕೆ ಹೆಚ್ಚುತ್ತದೆ. ಕುಶಲಕರ್ಮಿಗಳು ಹೆಚ್ಚಿನ ಆದಾಯ ನಿರೀಕ್ಷಿಸಬಹುದು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಬಹಳ ದಿನಗಳಿಂದ ಬರದೇ ಕಾಡಿಸುತ್ತಿದ್ದ ಸರ್ಕಾರಿ ದಾಖಲೆ ಈಗ ಬರುವ ಸಾಧ್ಯತೆ ನಿಚ್ಚಳವಾಗಿದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಆಕಸ್ಮಿಕ ಧನಲಾಭದ ಸಾಧ್ಯತೆಗಳಿವೆ. ಧನದ ಒಳಹರಿವು ಉತ್ತಮ. ಒಡಹುಟ್ಟಿದವರೊಂದಿಗೆ ಮತ್ತು ಬಂಧುಗಳೊಡನೆ ತಾಳ್ಮೆಯಿಂದ ವ್ಯವಹರಿಸುವುದು ಅತ್ಯುತ್ತಮ. ನಿಮ್ಮ ಎಲ್ಲ ಕೆಲಸಗಳಲ್ಲೂ ಶಿಸ್ತು ಬದ್ಧತೆ ಅಳವಡಿಸಿಕೊಳ್ಳುವುದು ಅನಿವಾರ್ಯ, ಹೀಗೆ ಮಾಡಿದಲ್ಲಿ ಉತ್ತಮ ಫಲಿತಾಂಶವಿರಲಿದೆ. ತಾಯಿಯಿಂದ ನಿಮಗೆ ಧನಸಹಾಯ ಒದಗಿಬರುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಲಾಭ ಇರುತ್ತದೆ. ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ವ್ಯಾಪಾರ- ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಆಸ್ತಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಆದಾಯ ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಒಂದು ರೀತಿಯ ಖುಷಿ ನಿಮ್ಮನ್ನು ಈ ವಾರ ಆವರಿಸುತ್ತದೆ. ನಿಮ್ಮ ಕಲ್ಪನೆಗಳಲ್ಲಿ ಕೆಲವೊಂದು ಸಾಕಾರವಾಗುವ ಸಂದರ್ಭವಿದೆ. ಯೋಚಿಸಿದ ಕೆಲಸಗಳು ನಿರ್ವಿಘ್ನವಾಗಿ ನಡೆದು ಮನಸಿಗೆ ನಿರಾಳ ಅನಿಸುತ್ತದೆ. ಹೊಸದಾಗಿ ರೂಪಿಸಿದ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ವಾರ. ವೃತ್ತಿಯಲ್ಲಿ ಹೆಚ್ಚು ಪರಿಶ್ರಮ ಹಾಕಿ ಹೊಸ ಆದಾಯದ ಮೂಲ ಕಂಡುಕೊಳ್ಳುವಿರಿ. ಪುರಾತನ ಅಥವಾ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಲು ಆರಂಭಿಸುವಿರಿ. ಹಳೆಯ ಸಾಲ ತೀರಿಸಲು ಈಗ ಉತ್ತಮ ಅವಕಾಶವಿದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿವೇಶನ ಕೊಳ್ಳುವ ನಿಮ್ಮ ಬಹುದಿನದ ಕನಸು ನನಸಾಗುತ್ತದೆ. ಹೊಸ ಸ್ನೇಹಿತ ಜತೆಗೆ ವ್ಯವಹಾರದಲ್ಲಿ ಪಾಲುದಾರಿಕೆ ದೊರೆತು ನಿಮಗೂ ಸಹ ಲಾಭವಾಗುತ್ತದೆ. ಅತಿಯಾದ ವೆಚ್ಚದಿಂದ ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೊಸ ಮಾರ್ಗವೊಂದು ಒದಗಿ ನಿರಾಳವೆನಿಸುತ್ತದೆ. ದಾಂಪತ್ಯದಲ್ಲಿ ಸ್ವಲ್ಪ ಮುನಿಸುಗಳು ತಲೆದೋರಬಹುದು. ಕೃಷಿಕರಿಗೆ ಉತ್ತಮ ಆದಾಯ ಬರುವ ಸಾಧ್ಯತೆ ಇದೆ. ಸರ್ಕಾರಿ ಸಾಲಗಳನ್ನು ಪಡೆದು ಕೈಸಾಲಗಳನ್ನು ಹಂತ ಹಂತವಾಗಿ ತೀರಿಸಬಹುದು. ತಾಯಿಯೊಡನೆ ಮುನಿಸು ಬರಬಹುದು. ಬಂಧುಗಳ ಮನೆಗೆ ಶುಭ ಕಾರ್ಯಕ್ಕಾಗಿ ಹೋಗಿ ಬರುವಿರಿ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಹಣಕಾಸಿನ ಸ್ಥಿತಿ ಉತ್ತಮ ಆಗುವ ಎಲ್ಲ ರೀತಿಯ ಲಕ್ಷಣಗಳಿವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಬಹಳ ದಿನಗಳಿಂದ ಹಾಡುತ್ತಿದ್ದ ನಿಮ್ಮ ಒಂದು ಚಿಂತೆಯು ದೂರವಾಗುವುದು. ವಾಸಸ್ಥಳ ಅಥವಾ ಉದ್ಯೋಗದ ಸ್ಥಳವು ಬದಲಾಗಬಹುದು. ಸ್ವಂತ ಜನರಿಂದಲೇ ಮಾನಸಿಕ ಕಿರಿಕಿರಿ ಅನುಭವಿಸ ಬೇಕಾಗಬಹುದು. ಒಡಹುಟ್ಟಿದವರ ಸಹಕಾರದಿಂದ ವ್ಯವಹಾರದಲ್ಲಿನ ಗೋಜಲುಗಳನ್ನು ಸರಿಪಡಿಸಿ ಕೊಳ್ಳುವಿರಿ. ಮೂಳೆ ನೋವುಗಳು ಸ್ವಲ್ಪ ಜಾಸ್ತಿ ಆಗಬಹುದು. ಹೈನುಗಾರಿಕೆಯನ್ನು ಮಾಡುವವರಿಗೆ ಬೇಕಾದ ಮಾಹಿತಿಗಳು ಲಭ್ಯವಾಗುತ್ತವೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಸಣ್ಣ ವಿಚಾರಕ್ಕಾಗಿ ನೆರೆಹೊರೆಯವರೊಡನೆ ವಾಗ್ವಾದವನ್ನು ಮಾಡದಿರಿ. ವ್ಯವಹಾರದಲ್ಲಿ ನಿಮ್ಮ ಪಾಲುಗಾರರ ನಡುವೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದು ಅತಿ ಅಗತ್ಯ.ನಿಮ್ಮ ಜಾಣ್ಮೆಯಿಂದ ವ್ಯವಹಾರಗಳನ್ನು ಸರಿಯಾಗಿ ತೂಗಿಸುವಿರಿ. ಸದ್ಯಕ್ಕೆ ದೊಡ್ಡಮೊತ್ತದ ವ್ಯವಹಾರಗಳನ್ನು ಆರಂಭಿಸುವುದು ಬೇಡ. ಸಂಗೀತ ಕಲಾವಿದರಿಗೆ ಬೇಡಿಕೆಯ ಬಂದು ಆದಾಯ ವೃದ್ಧಿಸುತ್ತದೆ.ವೃತ್ತಿಯಲ್ಲಿ ಅಧಿಕಾರ ಅಥವಾ ಧನದ ಅಭಿವೃದ್ಧಿ ಇರುತ್ತದೆ. ಚಿನ್ನದ ಕುಸುರಿ ಆಭರಣಗಳ ವ್ಯಾಪಾರಿಗಳಿಗೆ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ. ಪಿತ್ರಾರ್ಜಿತ ಆಸ್ತಿಯ ದಾಖಲೆಗಳಲ್ಲಿ ಇದ್ದ ವ್ಯತ್ಯಾಸಗಳು ಸರಿಯಾಗುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ವೃತ್ತಿಯಲ್ಲಿ ನಿಮ್ಮ ದಕ್ಷತೆಗೆ ಮನ್ನಣೆ ದೊರೆಯುತ್ತದೆ. ವೈಯಕ್ತಿಕ ಬದುಕಿನಲ್ಲಿ ಹಿತಕರ ವಾತಾವರಣ ಕಾಣಬಹುದು. ಹಣದ ಹರಿವಿನಲ್ಲಿ ಏರಿಕೆ ಕಾಣಬಹುದು. ವಿದ್ಯಾರ್ಥಿಗಳಿಗೆ ಓದಲು ಉತ್ತಮ ಹುಮ್ಮಸ್ಸು ತರುತ್ತದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರ ವಹಿಸಿ. ಬಾಯಿ ಮಾತಿನಲ್ಲಿ ನಂಬಿ ಯಾರಿಗೂ ಹಣ ಕೊಡಬೇಡಿ. ಹಿರಿಯರು ಕಿರಿಯರೊಡನೆ ಮಾತನಾಡುವಾಗ ಎಚ್ಚರವಿರಲಿ ಇಲ್ಲವಾದಲ್ಲಿ ಅವರ ಗೌರವಕ್ಕೆ ಕುಂದು ಬರುವುದು. ಕೃಷಿ ಕೆಲಸ ಮಾಡುವವರಿಗೆ ಅಭಿವೃದ್ಧಿ ಇದೆ. ಸ್ತ್ರೀಯರಿಗೆ ತವರುಮನೆಯಿಂದ ಆಸ್ತಿ ಅಥವಾ ಧನ ಸಹಾಯ ಬರಬಹುದು.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ವ್ಯವಹಾರದಲ್ಲಿ ಸುಧಾರಣೆ ಕಾಣಬಹುದು. ಸರ್ಕಾರಿ ಅಧಿಕಾರಿಗಳಿಂದ ವ್ಯವಹಾರದ ಬಗ್ಗೆ ತಂಟೆ ತಕರಾರು ಬರಬಹುದು. ಹಲವಾರು ರೀತಿಯ ದಾಖಲೆಗಳನ್ನು ಕೇಳಬಹುದು. ಈ ಬಗ್ಗೆ ಸರಿಯಾಗಿ ಮಾಹಿತಿ ಇಟ್ಟುಕೊಳ್ಳಿ. ಹಣದ ಒಳ ಹರಿವು ಸಾಮಾನ್ಯ. ಕೆಲಸ ಕಾರ್ಯಗಳು ಸ್ವಲ್ಪ ನಿಧಾನವಾದರೂ ಸತತ ಪ್ರಯತ್ನದಿಂದ ಮುಗಿಯುವುದು. ಕೃಷಿಕರಿಗೆ ಉತ್ತಮ ಆದಾಯವಿರಲಿದೆ. ಮಕ್ಕಳ ಬಗ್ಗೆ ಸ್ವಲ್ಪ ಅಸಮಾಧಾನ ಮೂಡಬಹುದು. ಒಡವೆ ವಸ್ತುಗಳ ಖರೀದಿಸುವ ಅವಕಾಶವಿದೆ. ತಾಯಿಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಯುವಕರು ಸಿಟ್ಟು ಸೆಡವು ಬಿಟ್ಟು ನಡೆಯುವುದು ಉತ್ತಮ, ಅದರಲ್ಲೂ ಉದ್ಯೋಗದಲ್ಲಿ ನಿಮ್ಮ ಮೇಲಿನ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳುವುದು ಬೇಡ. ರಚನಾತ್ಮಕ ಕಾರ್ಯ ಮಾಡಲು ಉತ್ಸಾಹ ತೋರುವಿರಿ. ಆಸ್ತಿಯ ಬಗ್ಗೆ ಸೋದರರ ಬಳಿ ಚರ್ಚಿಸುವಿರಿ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯವು ಸುಧಾರಣೆಯತ್ತ ಸಾಗುತ್ತದೆ. ಪ್ರೀತಿ-ಪ್ರೇಮದಲ್ಲಿ ಇರುವವರು ತಮ್ಮ ಹಿರಿಯರಿಗೆ ಈ ವಿಚಾರ ತಿಳಿಸುವುದು ಒಳ್ಳೆಯದು. ವಾಹನ ದುರಸ್ತಿ ಮಾಡುವವರಿಗೆ ಆದಾಯ ಹೆಚ್ಚಲಿದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಕೌಟುಂಬಿಕ ಸೌಖ್ಯಗಳನ್ನು ಈ ವಾರ ಕಾಣಬಹುದು. ಸಂಗಾತಿಯ ಸಹಾಯದಿಂದ ಕೆಲವು ಕೆಲಸಗಳು ಮುಗಿಯುತ್ತವೆ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ ಕಾಣಬಹುದು. ಯಾವುದೇ ಹಿಂಜರಿಕೆಯಿಲ್ಲದೆ ಕೆಲಸ ಕಾರ್ಯಗಳನ್ನು ನಿರ್ವಹಿಸಿದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುವುದು ಅತಿ ಅಗತ್ಯ. ಅನವಶ್ಯವಾಗಿ ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿರಿ. ಶೀತಬಾಧೆ ಇರುವವರು ಎಚ್ಚರ ವಹಿಸಿ. ಸಂಗಾತಿಯ ಸಹಾಯದಿಂದ ವೃತ್ತಿಯಲ್ಲಿ ಅಭಿವೃದ್ಧಿ ಕಾಣಬಹುದು. ಪುಸ್ತಕ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ವಾಹನಗಳ ಬಿಡಿಭಾಗ ಮಾರುವವರಿಗೆ ಲಾಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT