ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯ ಎನ್ನುವುದು ಸಹಜವಾಗಿರಬೇಕು

Last Updated 12 ಆಗಸ್ಟ್ 2021, 5:51 IST
ಅಕ್ಷರ ಗಾತ್ರ

ಪದ್ಮಾಕರಂ ದಿನಕರೋ ವಿಕಚಂ ಕರೋತಿ

ಚಂದ್ರೋ ವಿಕಾಸಯತಿ ಕೈರವಚಕ್ರವಾಲಮ್ |

ನಾಭ್ಯರ್ಥಿತೋ ಜಲಧರೋಽಪಿ ಜಲಂ ದದಾತಿ

ಸಂತಃ ಸ್ವಯಂ ಪರಹಿತೇ ವಿಹಿತಾಭಿಯೋಗಾಃ ||

ಇದರ ತಾತ್ಪರ್ಯ ಹೀಗೆ:

‘ಸಹಜವಾಗಿಯೇ ಸೂರ್ಯನು ಕಮಲವನ್ನು ಅರಳಿಸುತ್ತಾನೆ; ತನ್ನ ಉದಯದಿಂದ ಚಂದ್ರನು ಕುಮುದಿನೀಸಮೂಹವನ್ನು ಅರಳಿಸುತ್ತಾನೆ; ಯಾರೂ ಬೇಡದಿದ್ದರೂ ತಾನಾಗಿಯೇ ಮೋಡವು ನೀರನ್ನು ಕೊಡುತ್ತದೆ. ಸಜ್ಜನರು ತಾವಾಗಿಯೇ ಮತ್ತೊಬ್ಬರಿಗೆ ಹಿತವನ್ನು ಉಂಟುಮಾಡುವುದರಲ್ಲಿ ಉದ್ಯುಕ್ತರಾಗಿರುತ್ತಾರೆ.’

ಸಹಾಯ ಎನ್ನುವುದು ಸಹಜವಾಗಿರಬೇಕು. ಅದೊಂದು ಪ್ರದರ್ಶನಕ್ಕೋ ಅಹಂಕಾರಕ್ಕೋ ವ್ಯವಹಾರಕ್ಕೋ ವಸ್ತು ಆಗಬಾರದು ಎಂಬುದು ಸುಭಾಷಿತದ ಆಶಯ. ಇದನ್ನು ಸಮರ್ಥಿಸಲು ಅದು ಹಲವು ಉದಾಹರಣೆಗಳನ್ನು ಕೊಟ್ಟಿದೆ.

ಸಹಜವಾಗಿಯೇ ಸೂರ್ಯನು ಕಮಲವನ್ನು ಅರಳಿಸುತ್ತಾನೆ. ಎಂದರೆ ಕಮಲ ಅರಳಲಿ ಎಂದು ಸೂರ್ಯ ಉದಯಿಸುವುದಿಲ್ಲ. ಮಾತ್ರವಲ್ಲ, ‘ಕಮಲ ನನ್ನನ್ನು ಕೇಳಲಿ, ಆಮೇಲೆ ನಾನು ಹುಟ್ಟುತ್ತೇನೆ‘ ಎಂದೂ ಅವನು ಯೋಚಿಸುವುದಿಲ್ಲ. ಸೂರ್ಯ ಹುಟ್ಟುವುದು ಅವನ ಸಹಜ ಸ್ವಭಾವ. ಅದರಿಂದ ಲೋಕವು ಪ್ರಯೋಜನವನ್ನು ಪಡೆಯುತ್ತದೆ. ಹೀಗೆಯೇ ನಾವು ಇನ್ನೊಬ್ಬರಿಗೆ ಮಾಡುವ ಸಹಾಯದ ಸ್ವರೂಪ ಇರಬೇಕು. ನಾವು ಸಹಾಯವನ್ನು ಮಾಡುತ್ತಿದ್ದೇವೆ – ಎಂಬ ಅರಿವು ಕೂಡ ನಮಗೆ ಇರಬಾರದು. ಇನ್ನೊಬ್ಬರು ಕೇಳಲಿ, ಬಳಿಕ ಸಹಾಯ ಮಾಡೋಣ – ಅಹಂಕಾರವೂ ಇರಬಾರದು. ನಾವು ಸಹಜವಾಗಿ ಮಾಡುವ ಕೆಲಸದಲ್ಲಿಯೇ ನಾಲ್ಕು ಜನರಿಗೆ ಸಹಾಯ ಸಿಗಬೇಕು. ನಮ್ಮ ಕ್ರಿಯಾಶೀಲತೆಯನ್ನೂ ಸ್ವಭಾವನ್ನೂ ಸ್ವರೂಪವನ್ನೂ ಹೀಗೆ ರೂಪಿಸಿಕೊಳ್ಳಬೇಕು.

ಹೀಗೆಯೇ, ತನ್ನ ಉದಯದಿಂದ ಚಂದ್ರನು ಕುಮುದಿನೀಸಮೂಹವನ್ನು ಅರಳಿಸುತ್ತಾನೆ; ಯಾರೂ ಬೇಡದಿದ್ದರೂ ತಾನಾಗಿಯೇ ಮೋಡವು ನೀರನ್ನು ಕೊಡುತ್ತದೆ. ಚಂದ್ರನಿಗೆ ಕುಮುದಗಳು ಎಂದಾದರೂ ಸನ್ಮಾನವನ್ನು ಏರ್ಪಾಟುಮಾಡುತ್ತದೆಯೆ? ಮಳೆಯ ನೀರಿನಿಂದ ಪ್ರಯೋಜನವನ್ನು ಪಡೆಯುತ್ತಲೇ ಇರುವ ನಾವು ಮೋಡಗಳಿಗೆ ತೆರಿಗೆಯನ್ನು ಕಟ್ಟುತ್ತಿದ್ದೇವೆಯೆ?

ನಮ್ಮ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಈ ಸುಭಾಷಿತವನ್ನು ಚೆನ್ನಾಗಿ ಮನನ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT