ಸಹಜವಾಗಿಯೇ ಸೂರ್ಯನು ಕಮಲವನ್ನು ಅರಳಿಸುತ್ತಾನೆ. ಎಂದರೆ ಕಮಲ ಅರಳಲಿ ಎಂದು ಸೂರ್ಯ ಉದಯಿಸುವುದಿಲ್ಲ. ಮಾತ್ರವಲ್ಲ, ‘ಕಮಲ ನನ್ನನ್ನು ಕೇಳಲಿ, ಆಮೇಲೆ ನಾನು ಹುಟ್ಟುತ್ತೇನೆ‘ ಎಂದೂ ಅವನು ಯೋಚಿಸುವುದಿಲ್ಲ. ಸೂರ್ಯ ಹುಟ್ಟುವುದು ಅವನ ಸಹಜ ಸ್ವಭಾವ. ಅದರಿಂದ ಲೋಕವು ಪ್ರಯೋಜನವನ್ನು ಪಡೆಯುತ್ತದೆ. ಹೀಗೆಯೇ ನಾವು ಇನ್ನೊಬ್ಬರಿಗೆ ಮಾಡುವ ಸಹಾಯದ ಸ್ವರೂಪ ಇರಬೇಕು. ನಾವು ಸಹಾಯವನ್ನು ಮಾಡುತ್ತಿದ್ದೇವೆ – ಎಂಬ ಅರಿವು ಕೂಡ ನಮಗೆ ಇರಬಾರದು. ಇನ್ನೊಬ್ಬರು ಕೇಳಲಿ, ಬಳಿಕ ಸಹಾಯ ಮಾಡೋಣ – ಅಹಂಕಾರವೂ ಇರಬಾರದು. ನಾವು ಸಹಜವಾಗಿ ಮಾಡುವ ಕೆಲಸದಲ್ಲಿಯೇ ನಾಲ್ಕು ಜನರಿಗೆ ಸಹಾಯ ಸಿಗಬೇಕು. ನಮ್ಮ ಕ್ರಿಯಾಶೀಲತೆಯನ್ನೂ ಸ್ವಭಾವನ್ನೂ ಸ್ವರೂಪವನ್ನೂ ಹೀಗೆ ರೂಪಿಸಿಕೊಳ್ಳಬೇಕು.