ಶಿವಮೊಗ್ಗ: ವಿಧಾನಸಭೆಗೆ ಸಮಾಜವಾದಿಗಳು, ಲೋಕಸಭೆಗೆ ಕಾಂಗ್ರೆಸಿಗರನ್ನು ಚುನಾಯಿಸಿ ಕಳುಹಿಸುತ್ತಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ, ಈಚಿನ ದಶಕಗಳಲ್ಲಿ ವ್ಯಕ್ತಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಕ್ಷೇತ್ರ ಮರುವಿಂಗಡಣೆ ನಂತರ ಕರಾವಳಿಯ ಭಾಗವನ್ನೂ ತನ್ನ ಮಡಿಲಲ್ಲಿ ಇಟ್ಟುಕೊಂಡ ಈ ಮಲೆನಾಡಿನಲ್ಲಿ, ಬಯಲುಸೀಮೆ ಗುಣಲಕ್ಷಣಗಳಿರುವ ಪ್ರದೇಶಗಳೂ ಅಡಕಗೊಂಡಿರುವುದು ವಿಶೇಷ. ಹಿಂದಿನಿಂದಲೂ ಸಿದ್ಧಾಂತ, ಜಾತಿ ಹಾಗೂ ವ್ಯಕ್ತಿ ಈ ಮೂರು ಈ ಕ್ಷೇತ್ರದ ನಿರ್ಣಯಕ ಅಂಶಗಳು ಎಂದು ರಾಜಕೀಯ ವಿಶ್ಲೇಷಕರು ವಿಶೇಷವಾಗಿ ಗುರುತಿಸುವುದುಂಟು.
ನೆಹರೂ ಅವರಿಗೆ ಬಹಳ ಹತ್ತಿರವಾಗಿದ್ದ, ಭೂಮಾಲಿಕರೂ ಆಗಿದ್ದ ಸಾಗರದ ಕೆ.ಜಿ.ಒಡೆಯರ್ ಮೊದಲ ಮತ್ತು ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆಲುವು ಕಂಡಿದ್ದರು. ಅವರಿಗೆ ಮತ್ತು ಅವರ ನಂತರದ ಅಭ್ಯರ್ಥಿಗಳಿಗೆ ಮತ್ತೊಂದು ಚುನಾವಣೆಯಲ್ಲಿ ಸಮಾಜವಾದಿಗಳು ತೀರಾ ಹತ್ತಿರದ ಎದುರಾಳಿಗಳಾಗಿದ್ದರು ಎನ್ನುವುದು ಗಮನಾರ್ಹ ಅಂಶ.
ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ ಶಿವಮೊಗ್ಗ ಜಿಲ್ಲೆಯಿಂದ ಇದುವರೆಗೂ ಕೇಂದ್ರದಲ್ಲಿ ಒಬ್ಬರೂ ಸಚಿವರಾಗಿಲ್ಲ. ಆದರೆ, ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆಯೇ 1967ರ ಚುನಾವಣೆಯಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಜೆ.ಎಚ್.ಪಟೇಲ್ ಅವರು, ಕಾಂಗ್ರೆಸ್ನ ಎಚ್.ಎಸ್.ರುದ್ರಪ್ಪ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದರು. ಅಂದು ಸಂಸತ್ತಿನಲ್ಲಿ ಜೆ.ಎಚ್.ಪಟೇಲರು ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ, ಇತಿಹಾಸ ನಿರ್ಮಿಸಿದ್ದರು.
ಸೋಲಿನ ರುಚಿ ಕಂಡ ಗಣ್ಯರು: ಇಂದು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ಅನೇಕರು ಈ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲಿನ ರುಚಿ ಉಂಡಿದ್ದಾರೆ. 1980ರಲ್ಲಿ ಈಗಿನ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಗೆಲುವು ಸಿಗಲಿಲ್ಲ. ಕಾಗೋಡು ಸತ್ಯಾಗ್ರಹದ ರೂವಾರಿ ಎಚ್.ಗಣಪತಿಯಪ್ಪ ಅವರು 1989ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸ್ಪರ್ಧಿಸಿದ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 1991ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಆಗಿನ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಷಡ್ಡಕ ಕೆ.ಜಿ.ಶಿವಪ್ಪ ಎದುರು ಸೋಲು ಕಂಡಿದ್ದರು. ಹಾಲಿ ಸಂಸದ ಡಿ.ಬಿ.ಚಂದ್ರೇಗೌಡ 1998ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಗಿನ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ವಿರುದ್ಧ ಸೋಲು ಕಂಡಿದ್ದರು.
ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ಕೂಡ 1999ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದರು. 2004ರಲ್ಲಿ ಭದ್ರಾವತಿ ನಂಟಿನ ಚಿತ್ರನಟ ಎಸ್.ದೊಡ್ಡಣ್ಣ ಈ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ, ಸೋಲು ಕಂಡಿದ್ದರು. ಈಗಿನ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್ 2005ರಲ್ಲಿ ಬಿಜೆಪಿಯಿಂದ, ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಜೆಡಿಎಸ್ನಿಂದ ಸ್ಪರ್ಧಿಸಿ, ಸೋತಿದ್ದರು. ಇವರಲ್ಲಿ ಎಚ್.ಗಣಪತಿಯಪ್ಪ, ಕೆ.ಎಚ್.ಶ್ರೀನಿವಾಸ, ಎಲ್.ಟಿ.ತಿಮ್ಮಪ್ಪ ಹೆಗಡೆ ಈಗ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದಾರೆ.
ಎರಡು ದಶಕ ಕಾಂಗ್ರೆಸ್ ಕಾಲ: ಜೆ.ಎಚ್.ಪಟೇಲರ ನಂತರ ಎರಡು ದಶಕಗಳ ಕಾಲ ಕ್ಷೇತ್ರವನ್ನು ಆಳಿದ್ದು ಕಾಂಗ್ರೆಸ್ ಪಕ್ಷ. ಈ ಭದ್ರಕೋಟೆಯನ್ನು ಬೀಳಿಸಿದ್ದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ. ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿ 1996ರ ಲೋಕಸಭೆಗೆ ಸ್ಪರ್ಧಿಸಿದ ಬಂಗಾರಪ್ಪ ಅದರಲ್ಲಿ ಜಯವನ್ನೂ ಕಂಡರು. ಅಲ್ಲಿಂದ 2009ರ ಚುನಾವಣೆಯವರೆಗೂ ವಿವಿಧ ಪಕ್ಷಗಳ ಮೂಲಕ ಅವರು ಸ್ಪರ್ಧಾ ಕಣದಲ್ಲಿದ್ದರು. ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಕ್ಷಗಳ ಹುರಿಯಾಳು ಆಗಿ ಮೂರು ಗೆಲುವು, ಎರಡು ಸೋಲು ಕಂಡಿದ್ದರು. ಅಷ್ಟೂ ಚುನಾವಣೆಗಳಲ್ಲಿ ಅವರಿಗೆ ಪ್ರಮುಖ ಎದುರಾಳಿಯಾಗಿದ್ದು ಆಯನೂರು ಮಂಜುನಾಥ.
2009ರ ಲೋಕಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಎಸ್.ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು. ಬಿಜೆಪಿಯಿಂದ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ
ಬಿ.ವೈ.ರಾಘವೇಂದ್ರ ಹುರಿಯಾಳು. ಬಂಗಾರಪ್ಪಗೆ ಜೆಡಿಎಸ್ ಬೆಂಬಲ ಘೋಷಿಸಿತ್ತು. ಆದರೆ, ಯಡಿಯೂರಪ್ಪ ನವರ ‘ಹತ್ಯಾರ’ಗಳ ಮುಂದೆ ಬಂಗಾರಪ್ಪ ಅವರ ಆಟ ನಡೆದಿರಲಿಲ್ಲ.
ಅದಲು – ಬದಲು: ಈ ಚುನಾವಣೆಯಲ್ಲಿ ಇದು ಅದಲು–ಬದಲು ಆಗುವ ಸಾಧ್ಯತೆಗಳಿವೆ. ಆಗ ಬಂಗಾರಪ್ಪ ವಿರುದ್ಧ ಯಡಿಯೂರಪ್ಪನವರ ಮಗ ನಿಂತಿದ್ದರು. ಈಗ ಬಿಜೆಪಿಯಿಂದ ಯಡಿಯೂರಪ್ಪ ಅವರೇ ಹುರಿಯಾಳು. ಬಂಗಾರಪ್ಪನವರ ಮಗಳು ಗೀತಾ ಶಿವರಾಜಕುಮಾರ್ ಜೆಡಿಎಸ್ ಅಭ್ಯರ್ಥಿಯಾಗುವ ಸೂಚನೆಗಳಿವೆ. ಅಂದರೆ ಒಬ್ಬ ಮಾಜಿ ಮುಖ್ಯಮಂತ್ರಿಗೆ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಮಗಳೇ ಎದುರಾಳಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.