ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಪ್ರತಿಷ್ಠೆಯ ಕಣದಲ್ಲಿ ಸಿ.ಎಂಗಳೇ ಎಲ್ಲ

Last Updated 18 ಜೂನ್ 2018, 13:21 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಧಾನಸಭೆಗೆ ಸಮಾಜ­ವಾದಿ­ಗಳು, ಲೋಕಸಭೆಗೆ ಕಾಂಗ್ರೆಸಿಗ­ರನ್ನು ಚುನಾಯಿಸಿ ಕಳುಹಿಸುತ್ತಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ, ಈಚಿನ ದಶಕಗಳಲ್ಲಿ ವ್ಯಕ್ತಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಕ್ಷೇತ್ರ ಮರುವಿಂಗಡಣೆ ನಂತರ ಕರಾವಳಿಯ ಭಾಗವನ್ನೂ ತನ್ನ ಮಡಿ­ಲಲ್ಲಿ ಇಟ್ಟುಕೊಂಡ ಈ ಮಲೆನಾಡಿನಲ್ಲಿ, ಬಯಲುಸೀಮೆ ಗುಣಲಕ್ಷಣಗಳಿರುವ ಪ್ರದೇಶಗಳೂ ಅಡಕಗೊಂಡಿರುವುದು ವಿಶೇಷ. ಹಿಂದಿನಿಂದಲೂ ಸಿದ್ಧಾಂತ, ಜಾತಿ ಹಾಗೂ ವ್ಯಕ್ತಿ ಈ ಮೂರು ಈ ಕ್ಷೇತ್ರದ ನಿರ್ಣಯಕ ಅಂಶಗಳು ಎಂದು ರಾಜಕೀಯ ವಿಶ್ಲೇಷಕರು ವಿಶೇಷ­ವಾಗಿ ಗುರುತಿಸುವುದುಂಟು.

ನೆಹರೂ ಅವರಿಗೆ ಬಹಳ ಹತ್ತಿರ­ವಾಗಿದ್ದ, ಭೂಮಾಲಿಕರೂ ಆಗಿದ್ದ ಸಾಗರದ ಕೆ.ಜಿ.ಒಡೆಯರ್ ಮೊದಲ ಮತ್ತು ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌­ನಿಂದ ಗೆಲುವು ಕಂಡಿದ್ದರು. ಅವರಿಗೆ ಮತ್ತು ಅವರ ನಂತರದ ಅಭ್ಯರ್ಥಿಗಳಿಗೆ ಮತ್ತೊಂದು ಚುನಾ­ವಣೆಯಲ್ಲಿ  ಸಮಾಜ­ವಾದಿಗಳು ತೀರಾ ಹತ್ತಿರದ ಎದು­ರಾಳಿಗಳಾಗಿದ್ದರು ಎನ್ನುವುದು ಗಮನಾರ್ಹ ಅಂಶ.

ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿ­ಗಳನ್ನು ನೀಡಿದ ಶಿವಮೊಗ್ಗ ಜಿಲ್ಲೆಯಿಂದ ಇದುವರೆಗೂ ಕೇಂದ್ರದಲ್ಲಿ ಒಬ್ಬರೂ ಸಚಿವರಾಗಿಲ್ಲ. ಆದರೆ, ಮುಖ್ಯಮಂತ್ರಿ­ಯಾಗುವುದಕ್ಕೂ ಮುಂಚೆಯೇ 1967­ರ ಚುನಾವಣೆಯಲ್ಲಿ ಸಂಯುಕ್ತ ಸೋಷಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿದ್ದ ಜೆ.ಎಚ್‌.ಪಟೇಲ್‌ ಅವರು, ಕಾಂಗ್ರೆಸ್‌ನ ಎಚ್‌.ಎಸ್‌.ರುದ್ರಪ್ಪ ಅವರನ್ನು ಸೋಲಿಸಿ ಸಂಸತ್‌ ಪ್ರವೇಶಿಸಿದ್ದರು. ಅಂದು ಸಂಸತ್ತಿ­ನಲ್ಲಿ ಜೆ.ಎಚ್‌.ಪಟೇಲರು ಮೊದಲ ಬಾರಿಗೆ ಕನ್ನಡದಲ್ಲಿ ಮಾತ­ನಾಡಿ, ಇತಿಹಾಸ ನಿರ್ಮಿಸಿದ್ದರು.

ಸೋಲಿನ ರುಚಿ ಕಂಡ ಗಣ್ಯರು: ಇಂದು ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ­ದಲ್ಲಿರುವ ಅನೇಕರು ಈ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲಿನ ರುಚಿ ಉಂಡಿದ್ದಾರೆ.  1980ರಲ್ಲಿ ಈಗಿನ ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಬಿಜೆಪಿಯಿಂದ ಚುನಾವಣೆಗೆ  ಸ್ಪರ್ಧಿಸಿ­ದ್ದರು. ಆದರೆ, ಗೆಲುವು ಸಿಗಲಿಲ್ಲ. ಕಾಗೋಡು ಸತ್ಯಾಗ್ರಹದ ರೂವಾರಿ ಎಚ್‌.­ಗಣಪತಿ­ಯಪ್ಪ ಅವರು 1989­ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸ್ಪರ್ಧಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ 1991ರ ಚುನಾ­ವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಆಗಿನ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಷಡ್ಡಕ ಕೆ.ಜಿ.ಶಿವಪ್ಪ ಎದುರು ಸೋಲು ಕಂಡಿದ್ದರು. ಹಾಲಿ ಸಂಸದ ಡಿ.ಬಿ.­ಚಂದ್ರೇಗೌಡ 1998ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಈಗಿನ ರಾಜ್ಯ­ಸ­ಭಾ ಸದಸ್ಯ ಆಯನೂರು ಮಂಜು­ನಾಥ ವಿರುದ್ಧ ಸೋಲು ಕಂಡಿದ್ದರು. 

ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್‌ ಕೂಡ 1999ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿ­ಸಿ­ದ್ದರು. 2004ರಲ್ಲಿ ಭದ್ರಾವತಿ ನಂಟಿನ ಚಿತ್ರನಟ ಎಸ್‌.ದೊಡ್ಡಣ್ಣ ಈ ಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪರ್ಧಿಸಿ, ಸೋಲು ಕಂಡಿದ್ದರು. ಈಗಿನ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.­ಭಾನುಪ್ರಕಾಶ್ 2005ರಲ್ಲಿ ಬಿಜೆಪಿ­ಯಿಂದ, ಮಾಜಿ ಶಾಸಕ ಎಲ್‌.ಟಿ.­ತಿಮ್ಮಪ್ಪ ಹೆಗಡೆ ಜೆಡಿಎಸ್‌­ನಿಂದ ಸ್ಪರ್ಧಿಸಿ, ಸೋತಿದ್ದರು. ಇವರಲ್ಲಿ ಎಚ್‌.ಗಣಪತಿಯಪ್ಪ, ಕೆ.ಎಚ್‌.­ಶ್ರೀನಿವಾಸ, ಎಲ್‌.ಟಿ.ತಿಮ್ಮಪ್ಪ ಹೆಗಡೆ ಈಗ ಸಕ್ರಿಯ ರಾಜಕಾರಣದಿಂದ ದೂರ­ವಾಗಿದ್ದಾರೆ.

ಎರಡು ದಶಕ ಕಾಂಗ್ರೆಸ್‌ ಕಾಲ: ಜೆ.ಎಚ್‌.­ಪಟೇಲರ ನಂತರ ಎರಡು ದಶಕ­ಗಳ ಕಾಲ ಕ್ಷೇತ್ರವನ್ನು ಆಳಿದ್ದು ಕಾಂಗ್ರೆಸ್‌ ಪಕ್ಷ. ಈ ಭದ್ರಕೋಟೆಯನ್ನು ಬೀಳಿಸಿದ್ದು ಮಾಜಿ ಮುಖ್ಯಮಂತ್ರಿ ಎಸ್‌.­ಬಂಗಾರಪ್ಪ. ಕರ್ನಾಟಕ ಕಾಂಗ್ರೆಸ್‌ ಪಕ್ಷ ಕಟ್ಟಿ 1996ರ ಲೋಕಸಭೆಗೆ ಸ್ಪರ್ಧಿಸಿದ ಬಂಗಾರಪ್ಪ ಅದರಲ್ಲಿ ಜಯವನ್ನೂ ಕಂಡರು. ಅಲ್ಲಿಂದ 2009ರ ಚುನಾವಣೆ­­ಯವರೆಗೂ ವಿವಿಧ ಪಕ್ಷಗಳ ಮೂಲಕ ಅವರು ಸ್ಪರ್ಧಾ ಕಣದಲ್ಲಿ­ದ್ದರು. ಕಾಂಗ್ರೆಸ್‌, ಬಿಜೆಪಿ, ಸಮಾಜ­ವಾದಿ ಪಕ್ಷಗಳ ಹುರಿಯಾಳು ಆಗಿ ಮೂರು ಗೆಲುವು, ಎರಡು ಸೋಲು ಕಂಡಿದ್ದರು. ಅಷ್ಟೂ ಚುನಾವಣೆಗಳಲ್ಲಿ ಅವರಿಗೆ ಪ್ರಮುಖ ಎದುರಾಳಿಯಾಗಿದ್ದು ಆಯನೂರು ಮಂಜುನಾಥ.

2009ರ ಲೋಕಸಭಾ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಎಸ್‌.­ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ­ಯಾಗಿದ್ದರು. ಬಿಜೆಪಿಯಿಂದ ಆಗಿನ ಮುಖ್ಯ­ಮಂತ್ರಿ ಬಿ.ಎಸ್‌.­ಯಡಿಯೂರಪ್ಪ ಅವರ ಮಗ

ಬಿ.ವೈ.­ರಾಘವೇಂದ್ರ ಹುರಿ­ಯಾಳು. ಬಂಗಾರಪ್ಪಗೆ ಜೆಡಿಎಸ್‌ ಬೆಂಬಲ ಘೋಷಿಸಿತ್ತು. ಆದರೆ, ಯಡಿಯೂರಪ್ಪ ನವರ ‘ಹತ್ಯಾರ’ಗಳ ಮುಂದೆ ಬಂಗಾರಪ್ಪ ಅವರ ಆಟ ನಡೆದಿರಲಿಲ್ಲ.

ಅದಲು – ಬದಲು: ಈ ಚುನಾವಣೆ­ಯಲ್ಲಿ ಇದು ಅದಲು–­ಬದಲು ಆಗುವ ಸಾಧ್ಯತೆ­ಗಳಿವೆ. ಆಗ ಬಂಗಾರಪ್ಪ ವಿರುದ್ಧ ಯಡಿಯೂರಪ್ಪನವರ ಮಗ ನಿಂತಿದ್ದರು. ಈಗ ಬಿಜೆಪಿಯಿಂದ ಯಡಿಯೂರಪ್ಪ ಅವರೇ ಹುರಿಯಾಳು. ಬಂಗಾರಪ್ಪನವರ ಮಗಳು ಗೀತಾ ಶಿವರಾಜಕುಮಾರ್ ಜೆಡಿಎಸ್‌ ಅಭ್ಯರ್ಥಿಯಾಗುವ ಸೂಚನೆ­ಗಳಿವೆ. ಅಂದರೆ ಒಬ್ಬ ಮಾಜಿ ಮುಖ್ಯ­ಮಂತ್ರಿಗೆ ಇನ್ನೊಬ್ಬ ಮಾಜಿ ಮುಖ್ಯ­ಮಂತ್ರಿ ಮಗಳೇ ಎದುರಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT