ಬಾಗಲಕೋಟೆ: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆ ಅನಂತವಾಗಿದೆ. ಶ್ರದ್ಧೆ, ದೃಢ ನಿರ್ಧಾರ, ಸತತ ಪರಿಶ್ರಮ ಇದ್ದರೆ ಯಶಸ್ಸು ಸಾಧ್ಯ ಎಂಬುದಕ್ಕೆ ವಜ್ಜರಮಟ್ಟಿಯ ಅಂಕಿತಾ ಕೊಣ್ಣೂರ ಸಾಕ್ಷಿಯಾಗಿದ್ದಾಳೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಮೆಳ್ಳಿಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಅವರಿಗೆ ₹2 ಲಕ್ಷ ನಗದು ಪುರಸ್ಕಾರ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನಿರಾಣಿ ಸಮೂಹವು ಆರ್ಥಿಕ ನೆರವು ನೀಡಲು ಸಿದ್ಧವಿದೆ ಎಂದರು.
ವಿದ್ಯಾರ್ಥಿ ಬಯಸಿದಲ್ಲಿ ಬಾಗಲಕೋಟೆಯ ತೇಜಸ್ ಅಂತರರಾಷ್ಟ್ರೀಯ ಪಿಯು ಕಾಲೇಜಿನಲ್ಲಿ ಉಚಿತ ಶಿಕ್ಷಣದ ಜೊತೆಗೆ ಭವಿಷ್ಯದ ಉನ್ನತ ವ್ಯಾಸಂಗದ ಖರ್ಚು ಸಹ ನಿರಾಣಿ ಸಮೂಹದಿಂದ ನೋಡಿಕೊಳ್ಳಲಾಗುವುದು ಎಂದು ಪಾಲಕರಿಗೆ ತಿಳಿಸಿದರು.
ಟ್ರ್ಯೂ ಆಲ್ಟ್ ವ್ಯವಸ್ಥಾಪಕ ನಿರ್ದೇಶಕ ವಿಜಯ ನಿರಾಣಿ ವಿದ್ಯಾರ್ಥಿನಿಗೆ ಶುಭ ಕೋರಿದರು. ಎಂ.ಆರ್.ಎನ್. ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ, ನಿರ್ದೇಶಕ ವಿಶಾಲ ನಿರಾಣಿ ಉಪಸ್ಥಿತರಿದ್ದರು.