ರಬಕವಿ ಬನಹಟ್ಟಿ: ರಬಕವಿ, ಬನಹಟ್ಟಿ ಹಾಗೂ ಸತ್ತು ಮುತ್ತಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಜನ ಮತ್ತು ಜಾನುವಾರುಗಳಿಗೆ ಆಸರೆಯಾಗಿದ್ದ ಹಿಪ್ಪರಗಿ ಬ್ಯಾರೇಜ್ ಹಿನ್ನೀರು ಕಡಿಮೆಯಾಗುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈ ಭಾಗದ ಜನರಿಗೆ, ಜಾನುವಾರುಗಳಿಗೆ ಮತ್ತು ಕೃಷಿ ಭೂಮಿಗೆ ನೀರಿನ ಕೊರತೆಯಾಗಲಿದೆ.
524.87 ಮೀಟರ್ ನೀರಿನ ಮಟ್ಟದ ಹಿಪ್ಪರಗಿ ಬ್ಯಾರೇಜ್ ನಲ್ಲಿ ಸದ್ಯ ನೀರಿನ ಮಟ್ಟವು 523.10 ಮೀಟರ್ ಇದ್ದು ಪ್ರತಿ ನಿತ್ಯ ಕೃಷಿ, ಕುಡಿಯುವ ನೀರು ಮತ್ತು ನೀರು ಆವಿಯಾಗುವುದು ಸೇರಿದಂತೆ ಸರಾಸರಿ 460 ಕ್ಯೂಸೆಕ್ ನೀರು ವ್ಯಯವಾಗುತ್ತಿದೆ. ಆದರೆ ನದಿಗೆ ಒಳ ಹರಿವು ಮಾತ್ರ ಇಲ್ಲ. ಒಟ್ಟು 6 ಟಿಎಂಸಿ ನೀರು ಸಂಗ್ರಹಣೆಯ ಬ್ಯಾರೇಜ್ ನಲ್ಲಿ ಸದ್ಯ 4.39 ಟಿಎಂಸಿ ಅಡಿ ಮಾತ್ರ ನೀರಿನ ಸಂಗ್ರಹವಿದೆ.
ಪ್ರತಿವರ್ಷ ಈ ಸಮಯದಲ್ಲಿ ಹಿಪ್ಪರಗಿ ಜಲಾಶಯದ ಹಿನ್ನೀರು ರಬಕವಿ ಬನಹಟ್ಟಿ ಸಮೀಪದ ಮದನಮಟ್ಟಿ ಗ್ರಾಮದ ಹನುಮಾನ ದೇವಸ್ಥಾನದ ಬಳಿಯಿರುವ ಸೇತುವೆವರೆಗೆ ಇರುತ್ತಿತ್ತು. ಆದರೆ ಫೆಬ್ರುವರಿ ಮಧ್ಯದಲ್ಲಿಯೇ ನೀರು ಬಹಳಷ್ಟು ಕಡಿಮೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾರೇಜ್ ನ ಮುಂಭಾಗದ ಹಳ್ಳಿಗಳಿಗೆ ನೀರಿನ ಸಮಸ್ಯೆಯಾದರೆ ಬ್ಯಾರೇಜ್ ನಿಂದ ನೀರನ್ನು ಬಿಟ್ಟರೆ ಬ್ಯಾರೇಜ್ ಮತ್ತಷ್ಟು ಬೇಗನೆ ಖಾಲಿಯಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಬ್ಯಾರೇಜ್ ನ ಹಿಂಭಾಗದಲ್ಲಿರುವ ರಬಕವಿ ಬನಹಟ್ಟಿ, ತೇರದಾಳ, ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ ತಾಲ್ಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರಿಗೆ ನೀರಿನ ಅಭಾವ ಉಂಟಾಗಲಿದೆ. ಸುತ್ತ ಮುತ್ತಲಿನ ಕೃಷಿಕರು ಬೃಹತ್ ಪಂಪಸೆಟ್ ಗಳ ಮೂಲಕ ನೀರನ್ನು ಪಡೆದುಕೊಳ್ಳುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಇಲ್ಲಿಯ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಕೂಡ ಕಡಿಮೆಯಾಗಲಿದೆ.
ಹಿಪ್ಪರಗಿ ಬ್ಯಾರೇಜ್ ನಲ್ಲಿ ಶೇ 73ರಷ್ಟು ಮಾತ್ರ ನೀರಿನ ಸಂಗ್ರಹವಿದೆ. ಈ ನೀರು ಎಪ್ರಿಲ್ ಕೊನೆಯವರಿಗೆ ಮಾತ್ರ ಬರುತ್ತದೆವಿಠ್ಠಲ ನಾಯಕ, ಬ್ಯಾರೇಜ್ ಕಿರಿಯ ಸಹಾಯಕ ಎಂಜಿನಿಯರ್
ಸದ್ಯ ಕೃಷ್ಣಾ ನದಿಯ ನೀರನ್ನು ಪೂರೈಕೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಸಾರ್ವಜನಿಕರು ಈಗಿನಿಂದಲೇ ಮಿತ ಪ್ರಮಾಣದಲ್ಲಿ ನೀರನ್ನು ಬಳಸುವಂತಾಗಬೇಕು–ಜಗದೀಶ ಈಟಿ, ಪೌರಾಯುಕ್ತರು ರಬಕವಿ ಬನಹಟ್ಟಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.