ಬಾಗಲಕೋಟೆ: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಇಸ್ಲಾಮಿಕ್ ಜೆಹಾದಿಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಬಂದ ಪ್ರತಿಭಟನಾಕಾರರು ಬಜರಂಗದಳದ ಪ್ರಾಂತ ಸಂಯೋಜಕ ಪುಂಡಲೀಕ ದಳವಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪುಂಡಲೀಕ ದಳವಾಯಿ ಮಾತನಾಡಿ, ‘ದೇಶದಲ್ಲಿನ ಪ್ರತ್ಯೇಕವಾದಿ ಮಾನಸಿಕತೆಯಿಂದ ಜೆಹಾದಿ ಸಂಘಟನೆಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ. ಜೊತೆಗೆ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ನಿರಂತರ ದಾಳಿ ನಡೆಸುತ್ತಾ ಬಂದಿವೆ’ ಎಂದು ಆರೋಪಿಸಿದರು.
‘ಬಲವಂತ ಮತಾಂತರ, ಹಾಗೂ ಗೋ ಕಳ್ಳರನ್ನು ರಕ್ಷಿಸಲು ಹಾಗೂ ದುಷ್ಕೃತ್ಯಗಳನ್ನು ಮರೆಮಾಚಲು ಯೋಜನಾ ಬದ್ಧ ರೀತಿಯಲ್ಲಿ ಹಿಂದೂ ಶ್ರದ್ಧಾ ಕೇಂದ್ರಗಳನ್ನು ಗುರಿ ಮಾಡಲಾಗುತ್ತಿದೆ. ಕೋಟ್ಯಾಂತರ ಜನರ ಸ್ಪೂರ್ತಿಯಾದ ‘ಜೈ ಶ್ರೀರಾಮ’ ಘೋಷಣೆಯನ್ನು ತಪ್ಪಾಗಿ ಅರ್ಥೈಸಿಅಪಪ್ರಚಾರ ಗೊಳಿಸುವ ಕಾರ್ಯ ನಡೆದಿದೆ’ ಎಂದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿಜಯ ಕಾಂಬಳೆ, ಮುಖಂಡ ಶಿವು ಮೇಲ್ನಾಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡರಾದ ದುರ್ಗೇಶ ಚೊಳಚ್ಚಗುಡ್ಡ, ಬಸವರಾಜ ಯಂಕಂಚಿ, ಅಜಯ ಸುಳಿಕೇರಿ, ಮುತ್ತಣ್ಣ ಜಂಬಗಿ ಪಾಲ್ಗೊಂಡಿದ್ದರು.