ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ಬನಶಂಕರಿದೇವಿ ಜಾತ್ರೆ ಅಂಗವಾಗಿ ಶನಿವಾರ ರಥೋತ್ಸವ ಹಾಗೂ ಜನಪದ ಉತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು.
ಬೆಳಿಗ್ಗೆ ಮಹಾ ಅಭಿಷೇಕದೊಂದಿಗೆ ಜಾತ್ರೆ ಆರಂಭಗೊಂಡಿತು. ಸುಮಂಗಲೆಯರು ದೇವಿಯ ಉಡಿತುಂಬಿದರು. ಮಧ್ಯಾಹ್ನ ಮುಂಬೈ ಮಾದೇಲಿ, ಕಿಚಡಿ ಮಹಾಪ್ರಸಾದ ವಿತರಣೆ ನಡೆಯಿತು. ಸಂಜೆ ದೇವಿಯ ಅಲಂಕೃತ ರಥೋತ್ಸವ ಕರಡಿ ಮಜಲು, ಬಾಜಾ ಭಜಂತ್ರಿ ಸೇರಿದಂತೆ ಸಕಲ ವಾದ್ಯ ವೃಂದದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ರಾತ್ರಿ ಬನಶಂಕರಿದೇವಿ ಸಾಂಸ್ಕೃತಿಕ ವೇದಿಕೆ ಹಾಗೂ ಬನಶಂಕರಿದೇವಿ ದೇವಸ್ಥಾನ ಸಮಿತಿ ವತಿಯಿಂದ ವೀರಣ್ಣ ಅಂಗಡಿ ತಂಡ ಹಾಗೂ ಅಡವಿಸೋಮಾಪೂರದ ಸಿದ್ಧಲಿಂಗೇಶ್ವರ ಹಾಸ್ಯ ಮತ್ತು ಜನಪದ ಕಲಾಸಂಘದ ನೇತೃತ್ವದಲ್ಲಿ ‘ಜನಪದೋತ್ಸವ’ ಕಾರ್ಯಕ್ರಮ ನಡೆಯಿತು. ಹಲವಾರು ಜನಪದ ಪ್ರಕಾರದ ವಿವಿಧ ಮಾದರಿಯ ಗೀತೆಗಳನ್ನು ಪ್ರಸ್ತುತ ಪಡಿಸಿ ಮನಸೆಳೆದರು.