ಬಾಗಲಕೋಟೆ: ‘ಕಾಂಗ್ರೆಸ್ನವರಿಗೆ ಕೇಸರಿ, ಹಿಂದೂಗಳನ್ನು ಕಂಡರೂ ಆಗಲ್ಲ. ದೇಶದಲ್ಲಿ ರಾಮನ ಸುನಾಮಿ ಎದ್ದಿದ್ದು ನೋಡಲಾಗುತ್ತಿಲ್ಲ. ತುಷ್ಟೀಕರಣಕ್ಕೆ ಕೆರಗೋಡಿನಲ್ಲಿ ಹನುಮನ ಧ್ವಜ ತೆಗೆದಿದ್ದಾರೆ’ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದರು.
‘ಯಾರೊಬ್ಬರೂ ಆಕ್ಷೇಪಿಸಿ, ದೂರು ಕೊಡದಿದ್ದರೂ ಧ್ವಜ ತೆಗೆಯಲಾಗಿದೆ. ಕೂಡಲೇ ಅದೇ ಸ್ಥಳದಲ್ಲಿ ಹನುಮನ ಧ್ವಜ ಹಾರಿಸಬೇಕು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಯೋಧ್ಯೆ, ಮಥುರಾ, ಕಾಶಿಯಲ್ಲಿನ ದೇವಸ್ಥಾನಗಳಿದ್ದ ಜಾಗ ನೀಡುವಂತೆ ಕೋರಲಾಗಿತ್ತು. ಹೋರಾಟ ಮಾಡಿ ಅಯೋಧ್ಯೆ ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ಮಥುರಾ, ಕಾಶಿಯನ್ನೂ ಪಡೆಯುತ್ತೇವೆ. ಮುಸ್ಲಿಮರನ್ನು ಕಾಂಗ್ರೆಸ್ ಒಪ್ಪಿಸಿದರೆ, ಸೌಹಾರ್ದ ಉಳಿಯುತ್ತದೆ. ಇಲ್ಲದಿದ್ದರೆ, ಮತ್ತೆ ಹೋರಾಟಕ್ಕೆ ಸಿದ್ಧ’ ಎಂದರು.
‘ನಾನು ರಾಜಕೀಯ ಮಾಡಲ್ಲ, ಚುನಾವಣೆಗೂ ನಿಲ್ಲಲ್ಲ. ಆದರೆ, ‘ಮೋದಿ ಗೆಲ್ಲಿಸಿ ಭಾರತ ಉಳಿಸಿ’ ಅಭಿಯಾನ ಆರಂಭಿಸಿದ್ದೇವೆ. ತುಷ್ಟೀಕರಣ, ಗ್ಯಾರಂಟಿಯಿಂದ ದೇಶ ಹಾಳಾಗುತ್ತದೆ ಎಂಬ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.