ಬಾಗಲಕೋಟೆ ನಗರದ ಬಗ್ಗೆ ಇತ್ತೀಚೆಗೊಂದು ತಮಾಷೆ ಮಾತು ಚಾಲ್ತಿಯಲ್ಲಿದೆ. ಹಳೆಯ ಊರಿನ ಯಾವುದೇ ಗಲ್ಲಿಯಲ್ಲಿ ನಿಂತು ನೀವೊಂದು ಕಲ್ಲು ಎಸೆದರೂ ಅದು ಯಾವುದಾದರೂ ಆಸ್ಪತ್ರೆಯ ಕಟ್ಟಡದ ಮೇಲೆ ಬೀಳುತ್ತದೆ.. ಹೆಜ್ಜೆಗೊಂದು ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿರುವ ಕಾರಣಕ್ಕೆ ಈ ಊರು ಕೃಷ್ಣಾ ತೀರದ ಮೆಡಿಕಲ್ ಹಬ್ ಎಂಬ ಅಭಿದಾನ ಪಡೆದಿತ್ತು. ಅದನ್ನು ಈ ಸೋಂಕು ಮಣ್ಣು ಪಾಲಾಗಿಸಿದೆ. ಸೋಂಕಿನ ರೂಪದಲ್ಲಿ ಜವರಾಯ ಮಾಡುತ್ತಿರುವ ಆರ್ಭಟಕ್ಕೆ ಜಿಲ್ಲೆಯ ಗ್ರಾಮೀಣರು ತತ್ತರಿಸಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ದೇವನಾಳದಲ್ಲಿ ಬೆಳಗಾವಿ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬಂದಿದ್ದ ಶಿಕ್ಷಕಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿರುವುದೇ ಸಾಕ್ಷಿ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ವಾಸ್ತವ ಚಿತ್ರಣ ಅರಿಯಲು ’ಪ್ರಜಾವಾಣಿ‘ ತಂಡ ಸಂಚರಿಸಿತು. ಅಲ್ಲಿ ಕಂಡ ವಿವರಗಳು ಇಲ್ಲಿವೆ ನೋಡಿ.