ಜಮಖಂಡಿ: ’ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶ್ರದ್ಧೆ, ಕಠಿಣ ಪರಿಶ್ರಮದ ಜೊತೆಗೆ ಉತ್ತಮ ಸಂವಹನ ಕೌಶಲವು ಮುಖ್ಯ’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.
ಮುರಗೋಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬ್ಯಾಡ್ಮಿಂಟನ್ ಕ್ಲಬ್ ಹಾಗೂ ಎಸ್.ಬಿ. ವಿಸ್ಡಮ್ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
’ಹತ್ತು ಪುಸ್ತಕ ಓದುವುದಕ್ಕಿಂತ ಒಂದು ಪುಸ್ತಕ ಓದಿ ಹತ್ತು ವಿಷಯ ತಿಳಿದುಕೊಳ್ಳಬೇಕು. ಯಾವ ಸಮಯದಲ್ಲಿ ಓದಬೇಕು ಎನ್ನುವುಕ್ಕಿಂತ ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕು ಎಂದು ನಿರ್ಧರಿಸಿಕೊಳ್ಳಬೇಕು. ಅಭ್ಯಾಸದ ನಡುವೆ ವಿಶ್ರಾಂತಿಯು ಅವಶ್ಯ. ನಿಖರತೆ, ತ್ವರಿತಗತಿ ಹಾಗೂ ಸಮಯ ನಿರ್ವಹಣೆಯೊಂದಿಗೆ ಉತ್ತಮ ಅವಲೋಕನ ಗುಣ ಹೊಂದಿರಬೇಕು’ ಎಂದರು.
ಡಿವೈಎಸ್ಪಿ ಶಾಂತವೀರ ಮಾತನಾಡಿ, ಮೊಬೈಲ್ಗಳನ್ನು ಬಿಟ್ಟು ಪುಸ್ತಕ ಹಿಡಿಯಬೇಕು. ಮನೋ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಮಾಧ್ಯಮ ಯಾವುದೆ ಇರಲಿ. ಸಾಧನೆ ಮಾಡುವದು ಮುಖ್ಯ. ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕು ಎಂದರು.
ಎಸ್.ಬಿ. ವಿಸ್ಡಮ್ ಕರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಭಂಡಾರಿಮಠ, ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಮುಧೋಳ ತಹಶೀಲ್ದಾರ ವಿನೋದ ಹತ್ತಳ್ಳಿ, ಸಿ.ಎಸ್. ಗಡ್ಡದೇವರಮಠ, ಸಂತೋಷ ಬಾಡಗಿ, ರಾಮಲಿಂಗ ಭೈರವಾಡಗಿ, ಲಿಂಗಾನಂದ ಗವಿಮಠ, ಮಂಜುನಾಥ ಬಾಡಗಿ, ರಮೇಶ ತೇಲಿ, ಉಮೇಶ ಮುರಗೋಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.