ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ವಿಚಾರದಲ್ಲಿ ಮಾತು ತಪ್ಪಿದ ಸರ್ಕಾರ: ಬಸವ ಜಯಮೃತ್ಯುಂಜಯ ಸ್ವಾಮೀಜಿ ಆರೋಪ

ಕೂಡಲಸಂಗಮದಲ್ಲಿ ಧರಣಿ ಸತ್ಯಾಗ್ರಹ ಅರಂಭ
Last Updated 21 ಏಪ್ರಿಲ್ 2022, 7:03 IST
ಅಕ್ಷರ ಗಾತ್ರ

ಬಾಗಲಕೋಟೆ: ’ಬಜೆಟ್ ಅಧಿವೇಶನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸುವುದಾಗಿ ಸರ್ಕಾರ ಹೇಳಿತ್ತು. ಈಗ ಮಾತು ತಪ್ಪಿದೆ. ಹೀಗಾಗಿ ಗುರುವಾರದಿಂದ ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ ಅರಂಭಿಸಿದ್ದೇನೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮದ ಐಕ್ಯಮಂಟಪದ ಎದುರು ಧರಣಿ ಆರಂಭಿಸಿರುವ ಅವರು, ಅದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಡಿಸೆಂಬರ್ 12ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಡೆದ ಸಮಾಜದ ಶಾಸಕರು ಹಾಗೂ ಸಚಿವರ ದುಂಡು ಮೇಜಿನ ಸಭೆಯಲ್ಲಿ ಮೀಸಲಾತಿ ಕೊಡುವುದಾಗಿ ಬಸವರಾಜ ಬೊಮ್ಮಾಯಿ ಮಾತು ಕೊಟ್ಟಿದ್ದರು. ಅದನ್ನು ತಪ್ಪಿದ್ದಾರೆ. ಅಲ್ಲಿಯೇ ಘೋಷಿಸಿದ್ದಂತೆ ಇಂದು ಹೋರಾಟ ಆರಂಭಿಸಿದ್ದೇನೆ ಎಂದರು.

ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಆಯಾ ತಾಲ್ಲೂಕು ಕೇಂದ್ರದಲ್ಲಿ ಸಮಾಜದವರು ಧರಣಿ ಸತ್ಯಾಗ್ರಹ ಅರಂಭಿಸಿ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ. ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಅವರ ಮೇಲೆ ಬಹಳಷ್ಟು ನಂಬಿಕೆ ಇಟ್ಟಿದ್ದೆವು. ಇನ್ನೂ ಅವರ ಮೇಲೆ ವಿಶ್ವಾಸವಿದೆ. ಶಿಗ್ಗಾವಿಯಲ್ಲಿ ಅವರು ಮೂರು ಬಾರಿ ಶಾಸಕರಾಗಲು ಪಂಚಮಸಾಲಿ ಸಮಾಜದ ಪ್ರೀತಿಯೂ ಕಾರಣವಾಗಿದೆ. ಆದರೆ ವಿಳಂಬ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡದಂತೆ ಯಾರಾದರೂ ಒತ್ತಡ ಹಾಕಿದ್ದಾರೆಯೇ? ಅದರಿಂದ ಅವರಿಗೆ ರಾಜಕೀಯವಾಗಿ ಹಿನ್ನಡೆ ಆಗಲಿದೆಯೇ? ಎಂಬುದನ್ನು ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಸಂಗಮನಾಥ ದೇವಾಲಯದ ಮುಖ್ಯಸ್ಥರು ಸ್ವತಃ ಮುಖ್ಯಮಂತ್ರಿ ಆಗಿರುವುದರಿಂದ ಅವರ ಗಮನ ಸೆಳೆಯಲು ಅಲ್ಲಿಯೇ ಧರಣಿ ನಡೆಸುತ್ತಿರುವುದಾಗಿ ಸ್ವಾಮೀಜಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT