ಬಾಗಲಕೋಟೆ: ಇಳಕಲ್ ನಗರದ ಹೃದಯಭಾಗದಲ್ಲಿರುವ ಬೃಹತ್ ವಾಣಿಜ್ಯ ಸಂಕೀರ್ಣ ಸಜ್ಜನ ಆರ್ಕೇಡ್ ನಲ್ಲಿ ಭಾನುವಾರ ತಡರಾತ್ರಿ ಭಾರೀ ಬೆಂಕಿಯ ಅವಘಡ ಸಂಭವಿಸಿದೆ.
ಈ ವೇಳೆ ವಾಣಿಜ್ಯ ಸಂಕೀರ್ಣದಲ್ಲಿದ್ದ 20ಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಬೆಂಕಿಗಾಹುತಿಯಾದ ಅಂಗಡಿಗಳಲ್ಲಿ ಇಳಕಲ್ ರೇಷ್ಮೆ ಸೀರೆ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಮೋರ್ ಸೂಪರ್ ಮಾರ್ಕೆಟ್, ಸಿಹಿ ತಿನಿಸಿನ ಮಾರಾಟ ಮಳಿಗೆಗಳು ಸೇರಿದ್ದು ₹10 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ತೀವ್ರವಾಗಿದ್ದ ಬೆಂಕಿಯ ಕೆನ್ನಾಲಿಗೆಯನ್ನು ತಹಬದಿಗೆ ತರಲು ಅಗ್ನಿಶಾಮಕ ದಳದವರು ಹರಸಾಹಸಪಟ್ಟರು. ಬೆಳಗಿನ ಜಾವದ ವೇಳೆಗೆ ಪರಿಸ್ಥಿತಿ ತಹಬದಿಗೆ ಬಂದಿದೆ. ಅದೃಷ್ಟವಶಾತ್ ಅಂಗಡಿಗಳಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.