ಗುಳೇದಗುಡ್ಡ: ಇಲ್ಲಿನ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾಗಿದ್ದ ನಾಗಪ್ಪ ಯಲಗುರ್ದಪ್ಪ ಗೌಡ್ರ (62) ಹಾಗೂ ಹಳದೂರ ಗ್ರಾಮದ ರಜಾಕಸಾಬ ರಂಜಾನಸಾಬ ಸಾದನಿ (38) ಮಂಗಳವಾರ ರಾತ್ರಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ನಾಗಪ್ಪ ಅವರಿಗೆ ಪುರಸಭೆ ಸದಸ್ಯೆಯಾಗಿರುವ ಪತ್ನಿ ಯಲ್ಲವ್ವ, ಐವರು ಪುತ್ರಿಯರು, ಪುತ್ರ ಇದ್ದಾರೆ.
ರಜಾಕ್ಸಾಬ್ ಅವರಿಗೆ ಪತ್ನಿ, ಪುತ್ರಿ, ಪುತ್ರಿ ಇದ್ದಾರೆ.
ಮಂಗಳವಾರ ಗುಳೇದಗುಡ್ಡದಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಾತ್ರಿ 12 ಗಂಟೆಗೆ ತುಮಕೂರು ಜಿಲ್ಲೆ ಶಿರಾ ಬಳಿ ಕಾರು ಚಾಲಕ ಹಳದೂರ ಗ್ರಾ.ಪಂ. ಸದಸ್ಯ ಬೀರಪ್ಪ ಕುರಿ ಕಾರಿನಿಂದ ಇಳಿದಿದ್ದರು. ಅದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಗಪ್ಪ ಗೌಡ್ರ ಹಾಗೂ ರಜಾಕಸಾಬ ಸಾದನಿ ಕಾರಿನಲ್ಲಿಯೇ ಮೃತಪಟ್ಟಿದ್ದಾರೆ. ಬೀರಪ್ಪ ಕುರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಮೇಲೆಯೇ ಕಾರು ನಿಲ್ಲಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ನಾಗಪ್ಪ ಕುಟುಂಬದವರು ತಿಳಿಸಿದ್ದಾರೆ.