ಬಾಗಲಕೋಟೆ: ಕೋವಿಡ್–19 ಸೋಂಕು ದೃಢಪಟ್ಟು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುನಗುಂದ ತಾಲ್ಲೂಕು ಗುಡೂರಿನ ಇಬ್ಬರು ಗುಣಮುಖರಾಗಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.
ಗುಡೂರು ಗ್ರಾಮದ 23 ವರ್ಷದ ಯುವಕ ಹಾಗೂ 23 ವರ್ಷದ ಯುವತಿ ಸೋಂಕಿನಿಂದ ಗುಣಮುಖರಾದವರು. ಮಹಾರಾಷ್ಟ್ರದಿಂದ ಮರಳಿದ್ದ ಅವರನ್ನು ಕ್ವಾರೆಂಟೈನ್ಗೆ ಒಳಪಡಿಸಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಸೋಂಕು ದೃಢಪಟ್ಟಿತ್ತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಇಬ್ಬರಿಗೂ ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 107 ಮಂದಿಗೆ ಸೋಂಕು ದೃಢಪಟ್ಟಿದೆ. 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. 15 ಪ್ರಕರಣ ಸಕ್ರಿಯವಾಗಿವೆ.