ಗುಳೇದಗುಡ್ಡ: ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನಿಂದ ತಯಾರಾದ ಸೀರೆ ಮತ್ತು ಖಣಗಳ ಮೇಲೆ ಹೆಚ್ಚುವರಿಯಾಗಿ ತೆರಿಗೆ ಆಕರಣೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ಗುಳೇದಗುಡ್ಡ ಹ್ಯಾಂಡಲೂಮ್ ಅಸೋಸಿಯೇಷನ್ ಮತ್ತು ಪಟ್ಟಣದ ವ್ಯಾಪಾರಸ್ಥರು ಸಂಸದ ಪಿ.ಸಿ.ಗದ್ದಿಗೌಡರಿಗೆ ಮನವಿ ಸಲ್ಲಿಸಿದರು.
ಸೆಪ್ಟೆಂಬರ್ನಲ್ಲಿ ನಡೆದ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ನಲ್ಲಿ ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನಿಂದ ತಯಾರಾಗುವ ಸೀರೆ ಮತ್ತು ಖಣಗಳ ಮೇಲೆ ಶೇ5ರಷ್ಟು ಇದ್ದಂತಹ ಸರಕು ಮತ್ತು ಸೇವಾ ತೆರಿಗೆಯನ್ನು ಶೇ 12ರಷ್ಟು ಮಾಡುವ ನಿರ್ಣಯ ಮಾಡಿದೆ.
ಹೆಚ್ಚುವರಿ ತೆರಿಗೆ ವಿಧಿಸಿದರೆ ಸೀರೆ ಮತ್ತು ಖಣಗಳ ಮಾರುಕಟ್ಟೆ ಸಂಪೂರ್ಣವಾಗಿ ನೆಲಕಚ್ಚಿ ಹೋಗುತ್ತದೆ. ಈಗಾಗಲೇ ಕೊರೊನಾ ಕಾರಣ ಉದ್ದಿಮೆಯ ಮಾರುಕಟ್ಟೆ ಅವನತಿಯ ಹಾದಿಯಲ್ಲಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ಏರಿಕೆ ಅಸಂಮಜಸ ಮತ್ತು ಈ ವಲಯದ ಉದ್ಯೋಗಸ್ಥರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಹತ್ತಿ, ಪಾಲಿಸ್ಟರ್ ಮತ್ತು ರೇಷ್ಮೆ ನೂಲಿನ ಮೇಲೆ ಶೇ 5ರಷ್ಟು ತೆರಿಗೆ ಇರುವುದುರಿಂದ ನಮ್ಮ ಉತ್ಪನ್ನಗಳಿಗೂ ಶೇ 5ರಷ್ಟು ತೆರಿಗೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸಂಪತ್ಕುಮಾರ ರಾಠಿ, ಲಕ್ಷ್ಮೀಕಾಂತ ಝಂವರ, ಗೋವಿಂದ ಬಜಾಜ, ಕಮಲಕಿಶೋರ ಧೂತ, ಸಚಿನ ತೊಗರಿ, ಡಾ. ಆನಂದ ದೊಡಮನಿ, ಸುರೇಶ ಪವಾರ, ನಾರಾಯಣಸಾ ರಾಯಬಾಗಿ, ಅಮರೇಶ ಕೊಳ್ಳಿ, ಬಾಬುಸೇಠ ಯಣ್ಣಿ, ಮುರುಳಿಧರ ಹಬೀಬ ಸೇರಿದಂತೆ ಮತ್ತಿತರರ ಪಟ್ಟಣದ ನೇಕಾರ ವ್ಯಾಪಾರಸ್ಥರು ಉಪಸ್ಥಿತರಿದ್ದರು.