ಮಹಾಲಿಂಗಪುರ: ಉತ್ತಮ ಆಹಾರ ಪದ್ಧತಿಯ ಜತೆಗೆ ಸಾಧ್ಯವಾದಷ್ಟು ದೈಹಿಕ ವ್ಯಾಯಾಮ ಮತ್ತು ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ದಿ.ಮಹಾಲಿಂಗಪುರ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.
ಪಟ್ಟಣದ ಮಿಲನ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದಲ್ಲಿ ಮಧುಮೇಹ, ಕ್ಯಾನ್ಸರ್, ಹೃದಯಾಘಾತದಂತಹ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿವೆ. ಹಾಗಾಗಿ ಆರೋಗ್ಯದತ್ತ ಗಮನಹರಿಸುವುದು ಅವಶ್ಯ ಎಂದು ತಿಳಿಸಿದರು.
ಕೇಂದ್ರದ ಮುಖ್ಯಸ್ಥ ಬಿ.ಎಂ.ಯಾದವಾಡ ಮಾತನಾಡಿ, ನಮ್ಮ ಪೂರ್ವಜರು ಹಾಕಿಕೊಟ್ಟ ಪದ್ಧತಿಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಜಗತ್ತಿನಲ್ಲೇ ಭಾರತದ ಆಹಾರ ಪದ್ಧತಿ ಅತ್ಯುತ್ತಮವಾಗಿತ್ತು. ಇಂದಿನ ಯುವಜನಾಂಗ ಇದನ್ನು ಅನುಸರಿಸುತ್ತಿಲ್ಲ ಎಂದರು.
ಮಹಾಲಿಂಗಪುರದ ಮಿಲನ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶೇಖರ ಅಂಗಡಿ ದಂಪತಿಯನ್ನು ಸನ್ಮಾನಿಸಲಾಯಿತು.