ಜಮಖಂಡಿ: ತಾಲ್ಲೂಕಿನ ಕನ್ನೋಳ್ಳಿ, ಕುರಗೋಡ ಸೇರಿದಂತೆ ಕೆಲವು ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸಲು ಸರಕಾರ 8.64 ರೂಪಾಯಿ ಕೋಟಿ ಯೋಜನೆಗೆ ಮಂಜೂರಾತಿ ನೀಡಿದೆ ಎಂದು ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾ ಯಿತಿ ಆಶ್ರಯದಲ್ಲಿ ತಾಲ್ಲೂಕಿನ ಕನ್ನೋಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಅರ್ಹ ಫಲಾನುಭವಿಗಳಿಗೆ ರೇಷ್ಮೆ ಚಂದರಕಿ ವಿತರಿಸಿ ಮಾತನಾಡಿದರು.
ಸುಗ್ಗಿ, ಬಿತ್ತನೆ ಇತ್ಯಾದಿ ಕೃಷಿ ಚಟುವಟಿಕೆಗಳು ಭರ ದಿಂದ ನಡೆಯುವ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸಲು ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಕೃಷಿ ಕಾರ್ಮಿಕರ ಕೊರತೆಯಿಂದ ಕೃಷಿಕ್ಷೇತ್ರ ಬಳಲುತ್ತಿದೆ ಎಂಬ ಅಂಶ ಮತ್ತು ಕೃಷಿ ಕ್ಷೇತ್ರದ ಮೇಲೆ ಆಗಿರುವ ದುಷ್ಪರಿಣಾಮ ಕುರಿತು ಸರಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.
ತಹಸೀಲ್ದಾರ ಸಿದ್ದು ಹುಲ್ಲೋಳಿ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ಖಾತ್ರಿ ಕಾರ್ಡ್ನ್ನು ತೆರಯಲು ಬೇಕಾಗುವ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ತಾಲ್ಲೂಕು ಪಂಚಾ ಯಿತಿಗೆ ವರ್ಗಾಯಿಸಲಾಗಿದೆ. ಇನ್ನೂ ಮುಂದೆ ಈ ಕೆಲಸಕ್ಕಾಗಿ ತಾಲ್ಲೂಕು ಪಂಚಾಯಿತಿ ಸಂಪರ್ಕಿಸಬೇಕು‘ ಎಂದರು.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಡಿದಿದ್ದೇವೆ. ಆದರೆ ಈ ವರೆಗೆ ಸಂಬಳ ನೀಡಿಲ್ಲ ಎಂದು ಕೆಲವು ಕಾರ್ಮಿಕರು ದೂರಿದರು. ತೋಟದ ಆಶ್ರಯ ಮನೆ ಕಟ್ಟಿಸಿಕೊಡುತ್ತೇವೆ ಎಂದು ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ರೂ.100 ರಿಂದ ರೂ.200 ಪಡೆದಿದ್ದಾರೆ. ತೋಟದ ಗುಡಿಸಲುಗಳ ಫೋಟೊ ತೆಗೆದುಕೊಂಡು ಹೋಗಿದ್ದಾರೆ ಎಂಬ ಸಂಗತಿಯನ್ನು ಕೆಲವರು ಸಭೆಯ ಗಮನಕ್ಕೆ ತಂದರು.
ದಲಿತರ ಕೇರಿಯ ರಸ್ತೆ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸುತ್ತಾರೆ ಎಂಬ ಆರೋಪ ಕೇಳಿಬಂತು. ಆದರೆ ಮನೆಯ ಅಡಿಪಾಯದ ಮೇಲೆ ರಸ್ತೆ ನಿರ್ಮಾಣ ಮಾಡಲು ಬಂದರೆ ಸುಮ್ಮನೆ ಹೇಗೆ ಇರಬೇಕು ಎಂದು ಅಲ್ಲಿಯೇ ಇದ್ದ ದಲಿತರೊಬ್ಬರು ಗಮನ ಸೆಳೆದರು. ಮಧ್ಯಪ್ರವೇಶಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.ಲೋಕೋಪಯೋಗಿ ಇಲಾಖೆಯ ಎಇಇ ಬಿ.ಕೆ.ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ವೈ.ಟಿ.ಗುಡ್ಡದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕಾರ್ಯಕ್ರಮಗಳ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.
ಜಿ.ಪಂ.ಸದಸ್ಯೆ ಲಕ್ಷ್ಮಿಬಾಯಿ ಸತಗೌಡ ನ್ಯಾಮಗೌಡ, ಗ್ರಾ.ಪಂ.ಅಧ್ಯಕ್ಷೆ ದೊಡ್ಡವ್ವ ದಳವಾಯಿ, ತಾ.ಪಂ.ಸದಸ್ಯೆ ಗೀತಾ ಬಾಪಕರ, ವಿಷ್ಣು ಜಾಧವ, ಸತಗೊಂಡ ಪಾಟೀಲ ಮತ್ತಿತರರು ವೇದಿಕೆಯಲ್ಲಿದ್ದರು. ರಾಜು ರಾಮು ಜಾಧವ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.