ಬಳ್ಳಾರಿ: ಚಿತ್ರನಟ ಯಶ್ ಅವರನ್ನು ನೋಡಲು ಬಂದಿದ್ದ ಅಭಿಯಾನಿಯೊಬ್ಬರ ಕಾಲಿನ ಮೇಲೆ ಯಶ್ ಬೆಂಗಾವಲು ವಾಹನ ಹರಿದಿದೆ.
ಗುರುವಾರ ನಡೆದ ಈ ಘಟನೆಯಲ್ಲಿ ಉಮೇಶ ಎಂಬ ಯುವಕನ ಕಾಲಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಬಳ್ಳಾರಿ ಹೊರ ವಲಯದ, ತಾಳೂರು ರಸ್ತೆಯಲ್ಲಿರುವ ಬಾಲಜಿ ನಗರ ಕ್ಯಾಂಪ್ ಎಂಬಲ್ಲಿ ‘ಈಗ’ ಸಿನಿಮಾ ಖ್ಯಾತಿಯ ಚಿತ್ರ ನಿರ್ಮಾಪಕ ಕೊರ್ರಪಾಟಿ ಸಾಯಿ ಎಂಬುವವರು ಅಮೃತೇಶ್ವರ ದೇಗುಲ ನಿರ್ಮಿಸಿದ್ದು, ಶಿವಲಿಂಗದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಇಂದು (ಫೆ. 29) ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ನಟ ಯಶ್ ಆಗಮಿಸಿದ್ದರು.
ಯಶ್ ಅವರನ್ನು ಕಾಣಲು ಸಾವಿರಾರು ಅಭಿಮಾನಿಗಳು ಬೆಳಗ್ಗಿನಿಂದಲೂ ದೇವಸ್ಥಾನದ ಬಳಿ ಸೇರಿದ್ದರು. ಬಾಲಾಜಿ ನಗರ ಕ್ಯಾಂಪ್ಗೆ ಯಶ್ ಆಗಮಿಸುತ್ತಲೇ ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗುವಾಗ ಸಿರಗುಪ್ಪ ಪಟ್ಟಣದ ವಾಸಿ ಉಮೇಶ ಅವರ ಕಾಲಿನ ಮೇಲೆ ಯಶ್ ಅವರ ಬೆಂಗಾವಲು ವಾಹನ ಹರಿಯಿತು. ಉಮೇಶನ ಕಾಲಿಗೆ ಗಾಯವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ದೇಗುಲ ಉದ್ಘಾಟನಾ ಕಾರ್ಯಕ್ರಮಕ್ಕೆ ಚಿತ್ರ ನಿರ್ದೇಶಕ ಎಸ್.ಎಸ್ ರಾಜಮೌಳಿ, ಸಚಿವ ಬಿ. ನಾಗೇಂದ್ರ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.