ಈ ಬಾನಾಡಿಗೆ ಎತ್ತರವಾದ ಮರ ಗಿಡಗಳೇ ಆವಾಸ ಸ್ಥಾನವಾಗಿದೆ. ಆದರೆ ಅವುಗಳಿಗೆ ಅನುಕೂಲಕರವಾದ ಸ್ಥಳಗಳಲ್ಲಿ ಎತ್ತರದ ಗಿಡಗಳಿರದೇ ಇರುವುದು ಸಂತಾನೋತ್ಪತ್ತಿಗೆ ತೊಡಕಾಗಿದೆ. ಬಾನಾಡಿಗಳಿಗೆ ಅಗತ್ಯವಾದ ಮೀನಿನ ಆಹಾರ ಸಿಗದಿರುವುದು ಅಳಿವಿನಂಚಿನ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಪಕ್ಷಿ ಪ್ರೇಮಿ ವಿಜಯ್ ಇಟ್ಟಿಗಿ. ನದಿಗಳ ಹಿನ್ನೀರು ಪ್ರದೇಶಗಳಲ್ಲಿ ಮೀನು ಇದರ ಮುಖ್ಯ ಆಹಾರ ಆಗಿರುವುದರಿಂದ ಮೀನುಗಾರರು ಪಕ್ಷಿಗಳಿಗೆ ತೊಂದರೆ ಕೊಡುವುದರಿಂದಲೂ ಬಾನಾಡಿಗಳ ಸಂಖ್ಯೆ ಇಳಿಮುಖವಾಗಿದೆ ಎನ್ನುತ್ತಾರೆ. ಆದರೆ ಅಂಕಸಮುದ್ರದ ಕೆರೆ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಎತ್ತರದ ಮರಗಳಿದ್ದು ಅಲ್ಲಿ ಸಂತಾನೋತ್ಪತ್ತಿ ಆರಂಭಿಸಿದೆ, ಇಲ್ಲಿ ಯಾವುದೇ ತೊಂದರೆ ಇರದ ಕಾರಣಕ್ಕಾಗಿ ನಿರ್ಭಯದಿಂದ ತಮ್ಮ ಸಂಖ್ಯೆಯನ್ನು ನಿಧಾನವಾಗಿ ಹೆಚ್ಚಿಸಿಕೊಂಡಿವೆ. ಕೆರೆಯಲ್ಲಿ ಅಗತ್ಯ ಮೀನು ಆಹಾರ ಪಕ್ಷಿಗಳಿಗೆ ದೊರೆಯುತ್ತಿವೆ, ಮೀನುಗಾರಿಕೆಯನ್ನು ಇಲ್ಲಿ ಸಂಪೂರ್ಣ ನಿಷೇಧಿಸುವ ಮೂಲಕ ಅರಣ್ಯ ಇಲಾಖೆ ಪಕ್ಷಿಗಳ ರಕ್ಷಣೆಗೆ ಮುಂದಾಗಿದೆ. ಪಕ್ಷಿಗಳಿಗೆ ಅಗತ್ಯ ಇರುವ ಮೀನುಗಳ ಮರಿಗಳನ್ನು ಬಿಡಲಾಗುತ್ತಿದೆ.