ಹೊಸಪೇಟೆ| ‘ಜುಗಲ್ಬಂದಿ’ ಸಿನಿಮಾ ಟ್ರೈಲರ್ ಬಿಡುಗಡೆ

ಹೊಸಪೇಟೆ (ವಿಜಯನಗರ): ‘ಜುಗಲ್ಬಂದಿ’ ಕನ್ನಡ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಿತು.
ಯುವ ಮುಖಂಡ ಸಿದ್ದಾರ್ಥ ಸಿಂಗ್ ಟ್ರೈಲರ್ ಬಿಡುಗಡೆಗೊಳಿಸಿದರು. ಚಿತ್ರದ ನಿರ್ಮಾಪಕ ದಿವಾಕರ್ ಡಿಂಡಿಂ, ನಟ ಸಂತೋಷ್ ಆಶ್ರಯ, ನಟಿ ಅರ್ಚನಾ ಕೊಟಗಿ, ಸಂಗೀತ ನಿರ್ದೇಶಕ ಪ್ರದ್ಯೋತ್ತಮ, ಮಾನಸಿ ಸುಧೀರ್, ಹಮೀದ್ ಶೆಟ್ಟಿ, ಬಾಲಕೃಷ್ಣ ಯಾದವ್, ಎಸ್.ಎಸ್. ಚಂದ್ರಶೇಖರ್, ಸಂತೋಷ್ ಬೆಳಗಲ್ ಇತರರಿದ್ದರು.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿವಾಕರ್ ಡಿಂಡಿಂ, ಕುರುಡ–ಮೂಗ ಇಬ್ಬರು ಗೆಳೆಯರು, ತಾಯಿ ಪ್ರೀತಿ ಹಾಗೂ ಇಬ್ಬರ ಪ್ರಣಯ ಚಿತ್ರದ ಕಥಾಹಂದರ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ಮಾಡಲಾಗಿದೆ. ಮಾನಸಿ ಸುಧೀರ್ ಹೊರತುಪಡಿಸಿದರೆ ಚಿತ್ರದಲ್ಲಿ ನಟಿಸಿರುವ ಎಲ್ಲರಿಗೂ ಮೊದಲ ಚಿತ್ರ. ‘ಕಾಂತಾರ’ದಂತೆ ಈ ಚಿತ್ರದಲ್ಲೂ ಮಾನಸಿ ಸುಧೀರ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ವಿವರಿಸಿದರು.
ಒಟ್ಟು 2.17 ನಿಮಿಷಗಳ ಈ ಚಿತ್ರವನ್ನು ಒಟ್ಟು ₹80 ಲಕ್ಷದಲ್ಲಿ ನಿರ್ಮಿಸಲಾಗಿದೆ. ಬರುವ ಏಪ್ರಿಲ್ನಲ್ಲಿ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ. ಹೊಸಬರೇ ಇರುವ ಈ ಚಿತ್ರವನ್ನು ವೀಕ್ಷಕರು ನೋಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಮಾನಸಿ ಸುಧೀರ್ ಮಾತನಾಡಿ, ‘ಕಾಂತಾರ’ ವಿಭಿನ್ನ ಬಗೆಯ ಚಿತ್ರ. ಪ್ರತಿಯೊಂದು ಚಿತ್ರದ ಪಾತ್ರ ಭಿನ್ನವಾಗಿರುತ್ತದೆ. ಯಾವ ಪಾತ್ರವೂ ದೊಡ್ಡದು ಅಥವಾ ಚಿಕ್ಕದು ಇರುವುದಿಲ್ಲ. ಅದು ಎಷ್ಟು ಪರಿಣಾಮಕಾರಿಯಾಗಿ ಇರುತ್ತದೆ ಎನ್ನುವುದು ಮುಖ್ಯ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.