ಮೈಲಾರ (ಹೂವಿನಹಡಗಲಿ ತಾಲ್ಲೂಕು): ‘ಸಂಪಾಯಿತಲೇ ಪರಾಕ್’ ಇದು ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಮೊಳಗಿದ ಮೈಲಾರಲಿಂಗೇಶ್ವರ ಕಾರಣಿಕ ಉಕ್ತಿ.
ಪೌರಾಣಿಕ ಹಿನ್ನೆಲೆಯ ಮೈಲಾರದ ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಜಯಘೋಷ, ಹರ್ಷೋದ್ಗಾರದ ನಡುವೆ ಪ್ರಸಕ್ತ ಸಾಲಿನ ಕಾರಣಿಕ ಜರುಗಿತು.
ಈ ಹಿಂದೆ ವಿಜಯನಗರ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ ಮೂರ್ತಿಗಳು ಹಾಗೂ ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲನ್ನು ಗೊರವ ಪರಿವಾರ ಭವ್ಯ ಮೆರವಣಿಗೆಯಲ್ಲಿ ಕರೆ ತಂದರು. ಈ ವೇಳೆ ‘ಏಳುಕೋಟಿ ಏಳುಕೋಟಿ ಚಾಂಗ್ ಬಲೋ..‘ ಎಂಬ ಹರ್ಷೋದ್ಗಾರಮುಗಿಲುಮುಟ್ಟಿತು.
ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಶ್ವಾರೋಢರಾಗಿ ಡೆಂಕನಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲನ್ನು ಗೊರವ ಪರಿವಾರ ಭವ್ಯ ಮೆರವಣಿಗೆಯಲ್ಲಿ ಕರೆ ತಂದರು.
ಜಯಘೋಷಗಳ ನಡುವೆ ಸಂಜೆ 5.30ಕ್ಕೆ ಬಿಲ್ಲು ಏರಿದ ಗೊರವಯ್ಯ ರಾಮಣ್ಣ, ಶೂನ್ಯವನ್ನು ದಿಟ್ಟಿಸಿ ಬಳಿಕ ಮೇಲಿನಂತೆ ಕಾರಣಿಕ ನುಡಿದು ಹಿಮ್ಮುಖವಾಗಿ ಜಿಗಿದರು. ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು.
‘ಪ್ರಸಕ್ತ ವರ್ಷದ ಕಾರಣಿಕ ನುಡಿಯು ಶುಭ ಸೂಚಕವಾಗಿದೆ’ ಎಂದು ಭಕ್ತರು ಅರ್ಥೈಸುತ್ತಿದ್ದರು. ಈ ವರ್ಷ ಮಳೆ, ಬೆಳೆ ಸಮೃದ್ಧವಾಗಿ ರೈತರ ಬದುಕು ಹಸನಾಗಲಿದೆ. ಗೂಡಾರ್ಥದಿಂದ ಕೂಡಿದ ಸ್ವಾಮಿಯ ಭವಿಷ್ಯವಾಣಿಯಲ್ಲಿ ಎಲ್ಲ ರಂಗಗಳಿಗೂ ಒಳಿತಾಗುವ ಆಶಯದ ನುಡಿಯಾಗಿದೆ ಎಂದು ಹಿರಿಯರು ವ್ಯಾಖ್ಯಾನಿಸಿದರು.