ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯಿಂದ ಗುರುವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಪೌರ ಕಾರ್ಮಿಕರ ದಿನ ಆಚರಿಸಲಾಯಿತು.
ಇದೇ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮುನ್ನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಕಾರ್ಯಕ್ರಮ ಉದ್ಘಾಟಿಸಿ, ‘ಸಾರ್ವಜನಿಕ ಸ್ಥಳವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರ ಕಾರ್ಯ ಬಹಳ ದೊಡ್ಡದಾಗಿದೆ. ಅವರ ಪ್ರಾಮುಖ್ಯತೆ ಸಮಾಜಕ್ಕೆ ಬಹಳ ಇದೆ. ಅದನ್ನು ಮನದಟ್ಟು ಮಾಡಿಕೊಡುವುದಕ್ಕಾಗಿಯೇ ಪ್ರತಿ ವರ್ಷ ಸರ್ಕಾರ ಪೌರ ಕಾರ್ಮಿಕರ ದಿನ ಆಚರಿಸುತ್ತಿದೆ’ ಎಂದು ಹೇಳಿದರು.
‘ಸಮಾಜದಲ್ಲಿ ಪೌರ ಕಾರ್ಮಿಕರಿಗೆ ವಿಶೇಷವಾದ ಗೌರವ ಇದೆ. ಅವರು ಅವರ ಕೆಲಸದ ಬಗ್ಗೆ ಕೀಳರಿಮೆ ಭಾವನೆ ಇಟ್ಟುಕೊಳ್ಳಬಾರದು. ನಾವು ಮಾಡುವ ಕೆಲಸದಲ್ಲಿ ಸಂತೃಪ್ತಿ ಇದ್ದರೆ ಸಾಕು. ನಾವು ಮಾಡುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದರೆ ಅದು ಗೌರವ ತಂದುಕೊಡುತ್ತದೆ’ ಎಂದು ತಿಳಿಸಿದರು.
‘ನಗರ, ಪಟ್ಟಣ ಸ್ವಚ್ಛವಾಗಿಡುವುದು ಪೌರ ಕಾರ್ಮಿಕರ ಜವಾಬ್ದಾರಿಯಷ್ಟೇ ಅಲ್ಲ. ಪ್ರತಿಯೊಬ್ಬರೂ ಸ್ವಚ್ಛತೆಗೆ ಒತ್ತು ಕೊಡಬೇಕು. ಸಾರ್ವಜನಿಕ ಸ್ಥಳದಲ್ಲಿ ಅನಗತ್ಯ ವಸ್ತುಗಳನ್ನು ಬಿಸಾಡಬಾರದು. ಇದರಿಂದ ಪೌರ ಕಾರ್ಮಿಕರ ಕೆಲಸ ಕಡಿಮೆಯಾಗುತ್ತದೆ’ ಎಂದು ಹೇಳಿದರು.
ಕಮಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್ ಮಾತನಾಡಿ, ‘ಪೌರ ಕಾರ್ಮಿಕರು ಅವರ ಆರೋಗ್ಯ ಲೆಕ್ಕಿಸದೆ ಹಗಲಿರುಳು ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಾರೆ. ಅವರು ಪಟ್ಟಣದ ಜೀವನಾಡಿಗಳು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್ ಅಮಾನುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಸದಸ್ಯ ರಾಮಸ್ವಾಮಿ, ಪಾಲಯ್ಯ, ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.