ಸಂಡೂರು: ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಉದ್ದೇಶವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದೇ ಆಗಿದೆ ಎಂದು ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಕಲ್ಯಾಣ ಕರ್ನಾಟಕ ವಿಭಾಗದ ಉಸ್ತುವಾರಿಗಳಾದ ಮಲ್ಲೇಶ್ವರಿ ಜುಜಾರೆ ಅವರು ತಿಳಿಸಿದರು.
ಇಲ್ಲಿನ ಕೃಪಾನಿಲಯ ಶಾಲೆಯಲ್ಲಿ ನಡೆದ ಕಬ್ಸ್, ಬುಲ್ಬುಲ್ಸ್, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ನಡೆದ ದೀಕ್ಷೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿದರು.
1907 ರಲ್ಲಿ ಬೇಡನ್ ಪೋವೆಲ್ ಅವರಿಂದ ರಲ್ಲಿ ಆರಂಭವಾಗಿ 1950ರಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಸ್ಥಾಪನೆಯಾಯಿತು. ಇಂದಿಗೂ ಸಂಸ್ಥೆ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುತ್ತಿದೆ. ಕಬ್ಸ್, ಬುಲ್ಬುಲ್ಸ್, ಸ್ಕೌಟ್ ಮತ್ತು ಗೈಡ್ಸ್ಗಳು ಸಂಸ್ಥೆಯ ಧೇಯೋದ್ದೇಶಗಳನ್ನು ಅರಿತು, ಪಾಲಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ತರಬೇತಿ ಆಯುಕ್ತರಾದ ಮಹಮ್ಮದ್ ಬಾಷ, ತಾಲ್ಲೂಕು ಘಟಕದ ಕಾರ್ಯದರ್ಶಿ ಜಿ.ಎಸ್. ಸೋಮಪ್ಪ, ಖಜಾಂಚಿ ಮಹಮ್ಮದ್ ಜಾವೀದ್ ಹಾಗೂ ಸ್ಕೌಟ್ ಶಿಕ್ಷಕ ಎ. ಮರಿಸ್ವಾಮಿ , ಕೃಪಾನಿಲಯ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಶರ್ಲಿ ಅವರು ಸ್ಕೌಟ್ ಸಂಸ್ಥೆಯ ಕಾರ್ಯಚಟುವಟಿಕೆಗಳು ಮತ್ತು ಮಕ್ಕಳು ಬೆಳೆಸಿಕೊಳ್ಳಬೇಕಾದ ಮೌಲ್ಯಗಳ ಕುರಿತು ಮಾತನಾಡಿದರು.
ಗೈಡ್ಸ್ ಶಿಕ್ಷಕಿ ಯಾಸಿನಾ , ಸಿಸ್ಟರ್ ಸಹನಾ, ದೀಪ್ತಿ ಥಾಮಸ್, ಶಿಕ್ಷಕಿಯರಾದ ಮೇರಿ, ತೇಜಸ್ವಿನಿ, ಸ್ಕೌಟ್, ಗೈಡ್ಸ್, ಕಬ್ಸ್, ಬುಲ್ಬುಲ್ಸ್ ವಿದ್ಯಾರ್ಥಿಗಳು , ಮಕ್ಕಳ ಪಾಲಕರು ಉಪಸ್ಥಿತರಿದ್ದರು.