ಬಳ್ಳಾರಿ: ಶಾಲೆ ಆರಂಭವಾದ ಎರಡನೇ ದಿನವೇ ಮಕ್ಕಳಿಗೆ ‘ಶಾಕ್’ ಕೊಟ್ಟ ಪ್ರಸಂಗ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ. ಆಡಳಿತ ಮಂಡಳಿ ಮಾಡಿಕೊಂಡಿರುವ ಎಡವಟ್ಟಿನಿಂದ ಮಕ್ಕಳು ಬೀದಿಗೆ ಬಿದ್ದಿದ್ದು, ರಸ್ತೆ ಬದಿಯ ಮರದ ಕೆಳಗೆ ಪಾಠ ಕೇಳುವಂತಾಗಿದೆ.
ಶಾಲಾ ಆಡಳಿತ ಮಂಡಳಿಯು ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಮರುಪಾವತಿ ಮಾಡದಿದ್ದರಿಂದ ಶಾಲೆಗೆ ಬೀಗ ಹಾಕಲಾಗಿದೆ. ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಸುಮಾರು 400 ಮಕ್ಕಳು ಓದುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ (ಬಿಇಒ) ಗುರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಮಕ್ಕಳು ಬೀದಿ ಬದಿಯಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸೋಮವಾರದಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಡಿಡಿಪಿಐ ಅಂದಾನಪ್ಪ ವಡಿಗೇರಿ ಭರವಸೆ ನೀಡಿದರು.
‘ಆಡಳಿತ ಮಂಡಳಿಯವರು ಶಾಲೆಯ ಮೇಲೆ ಸಾಲ ಪಡೆದಿದ್ದಾರೆ. ಆಂಧ್ರ ಮೂಲದ ಖಾಸಗಿ ಹಣಕಾಸು ಸಂಸ್ಥೆ ಸಾಲ ಕೊಟ್ಟಿದೆ. ಸಾಲ ಸರಿಯಾಗಿ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಲಯದಿಂದ ಆದೇಶ ತಂದು ಬೀಗ ಹಾಕಲಾಗಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.