ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಗೋಳ ಜಾಕ್ವೆಲ್ಗೆ ತುಂಗಭದ್ರಾ ನದಿಯ ಮೂಲಕ ಸಿಂಗಟಾಲೂರು ಬ್ಯಾರೇಜ್ನಿಂದ ಸೋಮವಾರ ನೀರು ಹರಿಸಲಾಗಿದೆ. ಇದರಿಂದಾಗಿ ಕಳೆದ ಎರಡು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಕೂಡ್ಲಿಗಿ, ಕೊಟ್ಟೂರು ಮತ್ತು ಪಟ್ಟಣದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ವಿಜಯನಗರ ಜಿಲ್ಲೆಯ ತಾಲ್ಲೂಕುಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಮಾರ್ಚ್ 29ರಿಂದ ಏಪ್ರಿಲ್ 6ರವರೆಗೆ ಪ್ರತಿದಿನ 3ಸಾವಿರ ಕ್ಯೂಸೆಕ್ನಂತೆ ಬ್ಯಾರೇಜ್ಗೆ ಹರಿಸಲಾಗಿತ್ತು. ಆದರೆ ನದಿಪಾತ್ರದಲ್ಲಿ ಅಲ್ಲಲ್ಲಿ ತಾತ್ಕಾಲಿಕ ತಡೆಗೋಡೆ ಕಟ್ಟಿದ್ದರಿಂದ ಸಿಂಗಟಲೂರು ಬ್ಯಾರೇಜ್ಗೆ ಕೇವಲ 0.37 ಟಿಎಂಸಿ ಅಡಿ ನೀರು ಹರಿದುಬಂದಿತ್ತು.
ವಾರದ ಬಳಿಕ ತಾಲ್ಲೂಕಿನ ಬನ್ನಿಗೋಳ ಜಾಕ್ವೆಲ್ಗೆ ನೀರು ಹರಿದು ಬಂದಿದೆ, ನೀರು ಸಂಗ್ರಹಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಗತ್ಯ ಸಿದ್ದತೆ ಕೈಗೊಂಡಿದೆ. ಮರಳು ಚೀಲಗಳಿಂದ ತಡೆಗೋಡೆ ನಿರ್ಮಿಸಿದ್ದಾರೆ. ಕಳೆದ ಎರಡು ದಿನಗಳಿಂದ ತಾಂತ್ರಿಕ ಸಿಬ್ಬಂದಿ ಜಾಲ್ವೆಲ್ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಜಾಕ್ವೆಲ್ನಿಂದ ಪಟ್ಟಣದಲ್ಲಿರುವ ಜಲಶುದ್ಧೀಕರಣ ಘಟಕಕ್ಕೆ ನೀರು ಹರಿಸಲಾಗಿದೆ. ಇಲ್ಲಿಂದಲೇ ಮೂರು ಪಟ್ಟಣಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಮೂರು ಸ್ಥಳೀಯ ಸ್ಥಂಸ್ಥೆಗಳ ಮುಖ್ಯಾಧಿಕಾರಿಗಳಿಂದ ಸಾರ್ವಜನಿಕರು ಕುದಿಯಿಸಿ ಆರಿಸಿ ಕುಡಿಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮಂಗಳವಾರದಿಂದಲೇ ಎಲ್ಲ ಕಡೆಗಳಲ್ಲೂ ನೀರು ಸರಬರಾಜು ಮಾಡಲು ಸ್ಥಳೀಯ ಸಂಸ್ಥೆಗಳು ಮುಂದಾಗಿದೆ. ಕುಡಿಯುವ ನೀರಿಗಾಗಿ ಅಲೆದಾಡುತ್ತಿದ್ದ ಸಾರ್ವಜನಿಕರು ಸದ್ಯಕ್ಕೆ ನಿರಾಳರಾಗುವ ಲಕ್ಷಣಗಳು ಕಾಣುತ್ತಿವೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಗೋಳ ಜಾಕ್ವೆಲ್ಗೆ ಸಿಂಗಟಾಲೂರು ಬ್ಯಾರೇಜ್ನಿಂದ ನೀರು ಹರಿದು ಬಂದಿರುವ ನೀರು ನಿರ್ಮಾಣಗೊಂಡ ತಡೆಗೋಡೆ ವೀಕ್ಷಿಸುತ್ತಿರುವ ಅಧಿಕಾರಿಗಳು
ಸಿಂಗಟಾಲೂರು ಬ್ಯಾರೇಜ್ನಿಂದ ನೀರು ಹರಿದುಬರುತ್ತಿದ್ದು ಬನ್ನಿಗೋಳ ಜಾಕ್ವೆಲ್ನಲ್ಲಿ 0.1ಟಿಎಂಸಿ ಅಡಿ ನೀರು ಸಂಗ್ರಹಿಸಲಾಗುತ್ತಿದೆ
-ಮಲ್ಲಿಕಾರ್ಜುನ ಪಾಟೀಲ, ಎಇಇ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊಸಪೇಟೆ
ನದಿಯ ನೀರು ಹರಿಯುವ ಎಲ್ಲ ಕಡೆಗಳಲ್ಲೂ ನಿಂತ ನೀರು ಇದ್ದ ಕಾರಣ ಜಲಶುದ್ಧೀಕರಣ ಘಟಕದಿಂದ ವೈಜ್ಞಾನಿಕವಾಗಿ ಶುದ್ಧೀಕರಿಸಿದ ನಂತರವೂ ಮುಂಜಾಗ್ರತ ಕ್ರಮವಾಗಿ ಎಲ್ಲ ಸಾರ್ವಜನಿಕರು ಕಾಯಿಸಿ ಆರಿಸಿ ಕುಡಿಯಬೇಕು.