ವಿಜಯಪುರ: ಗುಣಮಟ್ಟದ ಹಾಲಿನಿಂದ ಡೇರಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹಳಿಯೂರು ಡೇರಿಯ ನೂತನ ಅಧ್ಯಕ್ಷ ರಘುಪತಿ ಹೇಳಿದರು.
ಹೋಬಳಿಯ ಹಳಿಯೂರು ಡೇರಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದನಂತರ ಅವರು ಮಾತನಾಡಿದರು.
ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿರುವ ಕಾರಣ ರೈತಾಪಿ ವರ್ಗದವರು ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮವನ್ನು ಬಿಟ್ಟು ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಇದರಿಂದ ಕುಟುಂಬಗಳ ನಿರ್ವಹಣೆ ಮೇಲೆ ಅಷ್ಟೊಂದು ಹೊಡೆತ ಬಿದ್ದಿಲ್ಲ ಎಂದರು.
ಹೈನುಗಾರಿಕೆ ಇಲ್ಲದಿದ್ದರೆ ಈ ಭಾಗದ ರೈತರು ಬೀದಿಗೆ ಬರಬೇಕಾಗಿತ್ತು. ರೈತರು ಉತ್ಪಾದನೆ ಮಾಡುತ್ತಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ನಾವೂ ಕೂಡ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಡೇರಿ ಉಪಾಧ್ಯಕ್ಷೆ ಆನಂದಮ್ಮ, ನಿರ್ದೇಶಕರಾದ ಚನ್ನಕೃಷ್ಣ, ವೆಂಕಟಾಚಲ, ಶಿವಕುಮಾರ್, ಕೇಶವ, ನಾಗೇಶ್, ನವೀನ್, ಪ್ರತಾಪ್, ಗೌರಮ್ಮ, ನಾರಾಯಣಪ್ಪ, ಮಂಜು, ಮುನಿಶಾಮಪ್ಪ ಮುಖ್ಯ ಕಾರ್ಯನಿರ್ವಾಹಕ ವೀರಾಂಜನೇಯಹಾಜರಿದ್ದರು.