ಆನೇಕಲ್: ಇತಿಹಾಸ ಪ್ರಸಿದ್ದ ಧರ್ಮರಾಯಸ್ವಾಮಿ ಕರಗ ಮಹೋತ್ಸವವನ್ನು ಮೇ 23ರಂದು ನಡೆಸಲು ಮತ್ತು ಚಂದ್ರಪ್ಪ ಅವರು ಕರಗವನ್ನು ಹೊರಲು ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಅವರು ಆದೇಶ ಹೊರಡಿಸಿದ್ದಾರೆ.
ಆನೇಕಲ್ ಧರ್ಮರಾಯಸ್ವಾಮಿ ಕರಗ ಹೊರುವ ಸಂಬಂಧ ಅರ್ಚಕರು ಮತ್ತು ಕುಲಸ್ಥರ ನಡುವೆ ಗೊಂದಲ ಏರ್ಪಟ್ಟಿತ್ತು. ತಹಶೀಲ್ದಾರ್ ಅವರ ನೇತೃತ್ವದಲ್ಲಿ ಹಲವು ಸುತ್ತುಗಳ ಸಭೆ ನಡೆಸಿದ್ದರು. ಕೊನೆಗೆ ಚಂದ್ರಪ್ಪ ಅವರಿಗೆ ಕರಗವನ್ನು ಹೊರಲು ಆದೇಶ ಹೊರಡಿಸಲಾಗಿದೆ.
ಚಂದ್ರಪ್ಪ ಅವರು 2011, 2012, 2016, 2017 ಮತ್ತು 2022ರಲ್ಲಿ ಕರಗವನ್ನು ಹೊತ್ತಿದ್ದರು. ಆನೇಕಲ್ನ ಕರಗವು ಬೆಂಗಳೂರು ಕರಗದಷ್ಟೇ ಖ್ಯಾತಿ ಹೊಂದಿದ್ದು ಹಲವಾರು ಧಾರ್ಮಿಕ ಆಚರಣೆಗಳಿಂದ ಆನೇಕಲ್ ಕರಗ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ.
ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿದೆ. ಧರ್ಮರಾಯಸ್ವಾಮಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ದತೆ ನಡೆಸಲಾಗಿದೆ.
ಆನೇಕಲ್ ಕರಗವು ವಾಡಿಕೆಯಂತೆ ಚಿತ್ತ ಪೂರ್ಣಿಮೆಯ ಏಪ್ರಿಲ್ ತಿಂಗಳ ಹುಣ್ಣಿಮೆಯ ದಿನದಂದು ನಡೆಯಬೇಕಿತ್ತು. ಲೋಕಸಭಾ ಚುನಾವಣೆ ಮತ್ತು ಎರಡು ಗುಂಪುಗಳ ನಡುವೆ ಒಮ್ಮತ ಮೂಡದ ಕಾರಣದಿಂದಾಗಿ ಮೇ ತಿಂಗಳ ಬುದ್ಧ ಪೂರ್ಣಿಮೆಯಂದು ನಡೆಯಲಿದೆ.