ದೊಡ್ಡಬಳ್ಳಾಪುರ:ನಂದಿಬೆಟ್ಟದ ತಪ್ಪಲಿನ ಅರ್ಕಾವತಿ ನದಿಯ ಪಾತ್ರದ ಮೊದಲ ಕೆರೆಯಾಗಿರುವ ಹೆಗ್ಗಡಿಹಳ್ಳಿ ಕೆರೆ 15 ವರ್ಷಗಳ ನಂತರ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಸ್ಥರು ಕೆರೆ ಕೋಡಿಯಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಮಹಿಳೆಯರು ಹೂವಿನ ಅಲಂಕಾರದಿಂದ ಸಿಂಗರಿಸಿದ ತಂಬಿಟ್ಟು ದೀಪಾರತಿಯೊಂದಿಗೆ ಬಾಗಿನ ಅರ್ಪಿಸಿದದರು. ಕಾರ್ಯಕ್ರಮದ ಅಂಗವಾಗಿ ಗಂಗಮ್ಮ ದೇವತೆಯ ಮೆರವಣಿಗೆ ಮಾಡ ಲಾಯಿತು.
ಪಂಚಗಿರಿ ಶ್ರೇಣಿಯ ವಿಶ್ವವಿಖ್ಯಾತ ನಂದಿಬೆಟ್ಟದ ಪಂಚ ನದಿಗಳಲ್ಲಿ ಒಂದಾದ ಅರ್ಕಾವತಿ ನದಿ ಉಗಮವಾದ ನಂತರ ಹೆಗ್ಗಡಿಹಳ್ಳಿ ಕೆರೆಗೆ ಹರಿಯಲಿದೆ. ನಂತರ ದೊಡ್ಡಬಳ್ಳಾಪುರ ನಾಗರಕೆರೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯ ಸೇರಲಿದೆ.
ಹಲವು ವರ್ಷಗಳ ನಂತರ ಅರ್ಕಾವತಿ ನದಿ ಮಾತ್ರದ ಕೆರೆಗಳು ತುಂಬಿರುವುದು ನದಿ ಪಾತ್ರದ ಜನರಲ್ಲಿ ಮಂದಹಾಸ ಮೂಡಿದೆ.
ಕೆರೆಕಟ್ಟೆಯ ಸುತ್ತಮುತ್ತ ಗಿಡಗಳು ಹೇರಳವಾಗಿ ಬೆಳೆದಿದ್ದು, ಕೋಡಿ ಸಹ ಕಿತ್ತು ಬಂದಿರುವ ಕಾರಣ ನೀರು ವ್ಯರ್ಥವಾಗಿ ಹರಿದು ಹೊರ ಹೋಗುತ್ತಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಕೆರೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.