ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿನ ನಿವಾಸಿಗಳು ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗೂ ನೀರಿನ ತೆರಿಗೆ ಪಾವತಿಸಲು ನಗರಸಭೆ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಜುಲೈ 31ರವರೆಗೆ ಸಾರ್ವಜನಿಕರ ಮನೆ ಬಾಗಿಲಿಗೆ ತೆರಿಗೆ ಚಲನ್ಗಳನ್ನು ತಲುಪಿಸುವ ವಿನೂತನ ಪ್ರಯತ್ನಕ್ಕೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಚಾಲನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ‘ಕೊರೊನಾ ಲಾಕ್ಡೌನ್ನಿಂದಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗೂ ನೀರಿನ ತೆರಿಗೆ ಪಾವತಿಯನ್ನು ಸುಮಾರು 2 ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಆ ನಂತರ ಸಾರ್ವಜನಿಕರು ನಗರಸಭೆಗೆ ಬಂದು ಕಂದಾಯ ಹಾಗೂ ನೀರಿನ ಬಿಲ್ ಕಟ್ಟಲು ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಉಂಟಾಗಿದೆ. ಆಸ್ತಿ ತೆರಿಗೆಯಲ್ಲಿ ಮೇ 31ರವರೆಗೆ ಇದ್ದ ಶೇ 5 ರಿಯಾಯಿತಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ’ ಎಂದರು.
‘ಸಾರ್ವಜನಿಕರು ಇದರ ಉಪಯೋಗ ಪಡೆಯುವ ಸಲುವಾಗಿ ನಗರಸಭೆ ವ್ಯಾಪ್ತಿಯ 31 ವಾರ್ಡ್ಗಳಲ್ಲಿನ ಮನೆ ಬಾಗಿಲಿಗೆ ಚಲನ್ಗಳನ್ನು ತಲುಪಿಸಲಾಗುತ್ತಿದೆ. ತೆರಿಗೆ ಹಣ ಸ್ವೀಕರಿಸಲು ನಗರಸಭೆ ಕೌಂಟರ್ನಲ್ಲಿಯೇ ಬ್ಯಾಂಕ್ ಸಿಬ್ಬಂದಿ ನೇಮಕ ಕುರಿತು ಸಂಬಂಧಪಟ್ಟ ಬ್ಯಾಂಕ್ನವರಿಗೆ ಮನವಿ ಮಾಡಲಾಗಿದೆ. ಬುಧವಾರದಿಂದ ನಗರಸಭೆ ಕಾರ್ಯಾಲಯದಲ್ಲೇ ತೆರಿಗೆ ಪಾವತಿಗೆ ಬ್ಯಾಂಕ್ ಕೌಂಟರ್ ಕಾರ್ಯಾರಂಭ ಮಾಡಲಿದೆ’ ಎಂದರು.
ಈ ವೇಳೆ ಕಂದಾಯ ಅಧಿಕಾರಿ ವಿ.ಸತ್ಯನಾರಾಯಣ, ಕಂದಾಯ ನಿರೀಕ್ಷಕ ನಾರಾಯಣ, ಬಿಲ್ ಕಲೆಕ್ಟರ್ ಯಲ್ಲಪ್ಪ, ನಾರಾಯಣಸ್ವಾಮಿ ಇದ್ದರು.
ಬುಧವಾರದಿಂದ ನಗರಸಭೆ ಕಾರ್ಯಾಲಯದಲ್ಲೇ ತೆರಿಗೆ ಪಾವತಿಗೆ ಬ್ಯಾಂಕ್ ಕೌಂಟರ್ ಕಾರ್ಯಾರಂಭ ಮಾಡಲಿದೆ -ರಮೇಶ್ ಎಸ್.ಸುಣಗಾರ್, ಪೌರಾಯುಕ್ತ