ಸೂಲಿಬೆಲೆ: ‘ಗ್ರಾಮ ಪಂಚಾಯಿತಿಗಳಿಗೆ, ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬರುವಂತಹ ಹಣಕಾಸಿನ ನಿಧಿಯನ್ನು ಬಳಸಿಕೊಂಡು ಹೊಸಕೋಟೆ ತಾಲ್ಲೂಕಿನ ಗ್ರಾಮಗಳನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲಾಗುತ್ತಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ಹೋಬಳಿಯ ಲಕ್ಕೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದಲ್ಲಿ ಕಲ್ಯಾಣಿ, ಸೋಲಾರ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಈಗಾಗಲೇ 8 ಪಂಚಾಯಿತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು, ಚೊಕ್ಕಹಳ್ಳಿ ಪಂಚಾಯಿತಿಯನ್ನು ಸಂಪೂರ್ಣ ಸೋಲಾರ್ ಪಂಚಾಯಿತಿ ಮಾಡಲಾಗಿದೆ. ಸೋಲಾರ್ ವಿದ್ಯುತ್ ಬಳಕೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನ ಪಡೆದ ವಿಧಾನಸಭಾ ಕ್ಷೇತ್ರವಾಗಿದೆ’ ಎಂದರು.
‘ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಇರುವುದರಿಂದ ಹೆಚ್ಚಿನ ಆದಾಯ ಪಂಚಾಯಿತಿಗಳಿಗೆ ಬರುವಂತಹದ್ದಾಗಿದ್ದು, ಸ್ವಂತ ಆರ್ಥಿಕ ಶಕ್ತಿಯನ್ನು ಪಂಚಾಯಿತಿಗಳು ಪಡೆದುಕೊಳ್ಳುತ್ತಿವೆ ಎಂದ ಅವರು, ಈ ದಿನ ಕಲ್ಯಾಣಿ ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಸುಮಾರು ₹ 50 ಲಕ್ಷ ರೂಪಾಯಿ ಕಾಮಗಾರಿಗಳನ್ನು, ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.
‘ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿದ್ದು, ಗ್ರಾಮಗಳನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿ.ಮುನಿಯಪ್ಪ, ಬಿ.ಜಿ.ನಾರಾಯಣಗೌಡ, ತಮ್ಮೇಗೌಡ, ಪದ್ಮಾವತಿ ಮಂಜುನಾಥ್, ತಾ.ಪಂ.ಸದಸ್ಯ ಡಿ.ಟಿ.ವೆಂಕಟೇಶ್, ಪಂಚಾಯಿತಿ ಆಡಳಿತಾಧಿಕಾರಿ ನಾಗರಾಜ್, ಮುಖಂಡರಾದ ಬೈರಪ್ಪ, ಬೈರೇಗೌಡ, ಶೀನಪ್ಪ, ಗೋಪಾಲ್ ಇದ್ದರು.