ಹೊಸಕೋಟೆ: ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದುವುದು ಮುಖ್ಯ ಎಂದು ಕೆನರಾ ಬ್ಯಾಂಕ್ ನ ವಿಭಾಗೀಯ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ ರಾವ್ ತಿಳಿಸಿದರು.
ತಾಲ್ಲೂಕಿನ ಮಲ್ಲಸಂದ್ರದಲ್ಲಿ ಕೆನರಾ ಬ್ಯಾಂಕ್ ನ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕಿನ ಶಾಖೆಗಳನ್ನು ತೆರೆದು ಆ ಭಾಗದಲ್ಲಿ ಹೆಚ್ಚಿನ ವಾಣಿಜ್ಯ ವ್ಯವಹಾರಗಳನ್ನು ಮಾಡುವ ಮೂಲಕ ಆ ಭಾಗವನ್ನು ಅಭಿವೃದ್ದಿ ಪಡೆಸಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಲು ಕೆಂದ್ರ ಸರ್ಕಾರ ನಿರ್ಧರಿಸಿದೆ ಎಂದರು.
ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ನಗದು ರಹಿತ ವ್ಯವಹಾರ ಮಾಡಬಹುದಾಗಿದೆ. ಇದರಿಂದ ಸಮಯದ ಉಳಿತಾಯ ಹಾಗೂ ಸುರಕ್ಷಿತ ವ್ಯವಹಾರ ಮಾಡಬಹುದಾಗಿದೆ ಎಂದರು.
ಗೃಹ ಸಾಲ, ವಾಣಿಜ್ಯ ಸಾಲ, ಕೃಷಿ ಸಾಲ. ಹೈನುಗಾರಿಕೆ ಸಾಲ ಹಾಗೂ ಇತರೆ ರೀತಿಯ ಸಾಲದ ಸೌಲಭ್ಯವಿದ್ದು ಕೂಲಿ ಕಾರ್ಮಿಕರಿಗೆ ಶೂನ್ಯ ಮೊತ್ತದ ಖಾತೆಗಳನ್ನು ತೆರೆಯಲು ಅವಕಾಶವಿದೆ. ಈ ಮೂಲಕ ಸರ್ಕಾರದ ಅನುದಾನಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಬಹುದಾಗಿದೆ ಎಂದರು.
ವ್ಯವಸ್ಥಾಪಕ ರಾಜಶೇಖರ್, ನಗರ ಘಟಕದ ವ್ಯವಸ್ಥಾಪಕಿ ಶೈಲಜ, ಮಲ್ಲಸಂದ್ರ ಶಾಖೆಯ ವ್ಯವಸ್ಥಾಪಕಿ ವನಿತಾ ಮುತ್ತುಸ್ವಾಮಿ, ಗ್ರಾಮದ ಮುಖಂಡರಾದ ಶೇಷಪ್ಪ, ಮುದ್ದುಮಲ್ಲಯ್ಯ, ಮಹೇಶ್ ಭಾಗವಹಿಸಿದ್ದರು.