ಹೊಸಕೋಟೆ: ‘ರಾಜ್ಯ ಸರ್ಕಾರವು ಅಡುಗೆ ಕಾರ್ಮಿಕರನ್ನೂ ಸಹ ಇತರ ಅಸಂಘಟಿತ ಕಾರ್ಮಿಕರ ಗುಂಪಿಗೆ ಸೇರಿಸಿ ನಮಗೂ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಬೇಕು’ ಎಂದು ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಚ್.ವಿ. ನಾಗರಾಜ್ ಆಗ್ರಹಿಸಿದರು.
ನಗರದ ತಾಲ್ಲೂಕು ಕಚೇರಿಯ ಬಳಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿಅವರು ಮಾತನಾಡಿದರು.
‘ಲಾಕ್ಡೌನ್ ನಂತರ ರಾಜ್ಯ ಸರ್ಕಾರವು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ₹ 5 ಸಾವಿರ ಸಹಾಯಧನ ಘೋಷಿಸಿತು. ಅಡುಗೆ ಕೆಲಸಗಾರರಿಗೂ ಸಹಾಯಧನ ಘೋಷಿಸಿತಾದರೂ ಈವರೆಗೆ ನಮಗೆ ಅದರ ಸೌಲಭ್ಯ ಸಿಗಲಿಲ್ಲ’ ಎಂದರು.
‘ಕಟ್ಟಡ ಮತ್ತು ಇತರ ಕಾರ್ಮಿಕರಿಗೆ ನೀಡುವಂತೆ ಅಡುಗೆ ಕಾರ್ಮಿಕರಿಗೂ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಹಾಗೂ 40 ವರ್ಷದಿಂದ 55 ವರ್ಷದವರೆಗಿನ ಕಾರ್ಮಿಕರಿಗೂ ನೋಂದಣಿಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ವೈ.ಜೆ. ಮುರಳೀಧರ್ ಮಾತನಾಡಿ, ‘ಅಡುಗೆಯವರ ಕಷ್ಟವನ್ನು ಯಾರೂ ವಿಚಾರಿಸದ ಕಾರಣ ನಾವು ಇಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ’ ಎಂದರು.
ಸಂಘದ ಕಾರ್ಯದರ್ಶಿ ರಮೇಶ್ ಬಾಬು, ತಾಲ್ಲೂಕು ಗೌರವಾಧ್ಯಕ್ಷ ಎನ್. ಆನಂದ್, ತಾಲ್ಲೂಕು ಅಧ್ಯಕ್ಷ ಪಿ.ಎನ್. ಮಂಜುನಾಥ್, ಶಿವಕುಮಾರ್, ಶಿವಶಂಕರ್, ರಾಘವೆಂದ್ರ, ಮಂಜುನಾಥ್ ಇದ್ದರು.