ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಲಿ

ದೊಡ್ಡಬಳ್ಳಾಪುರದಲ್ಲಿ ರಾಜ್ಯೋತ್ಸವ
Published 2 ಜನವರಿ 2024, 16:16 IST
Last Updated 2 ಜನವರಿ 2024, 16:16 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಆಡಳಿತದ ಪ್ರತಿ ಹಂತದಲ್ಲೂ ಕನ್ನಡಕ್ಕೆ ಆದ್ಯತೆ ನೀಡಲು ಕನ್ನಡ ಭಾಷಾ ವಿಧೇಯಕವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಯಾಗಬೇಕಿದೆ. ಅಂತೆಯೇ ನಾಮಫಲಕಗಳಲ್ಲಿಯೂ ಕನ್ನಡಕ್ಕೆ ಆದ್ಯತೆ ನೀಡಲೇ ಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಬಿ.ಎನ್‌.ಕೃಷ್ಣಪ್ಪ ಹೇಳಿದರು.

ನಗರದ ಗಂಗಾಧರಪುರದ ಶ್ರೀರಾಜ ರಾಜೇಶ್ವರಿ ಕನ್ನಡ ಯುವಕ ಸಂಘದ 25ನೇ ವಾರ್ಷಿಕೋತ್ಸವ, 68ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಶ್ರೀಮುತ್ಯಾಲಮ್ಮ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ಪರಂಪರೆ, ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಕನ್ನಡ ಬಳಕೆ ಹೆಚ್ಚಾದಷ್ಟು ಭಾಷೆಯ ಅಸ್ತಿತ್ವ ಹೆಚ್ಚಾಗುತ್ತದೆ. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕಾರ್ಯವಾಗಬೇಕಿದೆ ಎಂದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ಇಡೀ ದೇಶದಲ್ಲಿ ಉದ್ಯೋಗ, ವಾಣಿಜ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಹೊಂದಿರುವ ರಾಜ್ಯ ಕರ್ನಾಟಕ ಎನ್ನುವುದು ಹೆಮ್ಮೆಯ ವಿಚಾರ. ರಾಜ್ಯೋತ್ಸವದ ಮೂಲಕ ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಿಸಬೇಕು. ಕನ್ನಡ ನಾಡು ನುಡಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಆರ್.ಕೆಂಪರಾಜು ಮಾತನಾಡಿ, ಶ್ರೀರಾಜ ರಾಜೇಶ್ವರಿ ಕನ್ನಡ ಯುವಕ ಸಂಘವು 1998ರಲ್ಲಿ ಸ್ಥಾಪನೆಯಾಗಿ ಪರಭಾಷಿಕರ ಪ್ರಾಬಲ್ಯದ ವಿರುದ್ಧ ದನಿ ಎತ್ತುವ ಮೂಲಕ ಸಕ್ರಿಯ ಸಂಘಟನೆಯಾಯಿತು. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ, ನಗರದ ಸಮಸ್ಯೆಗಳ ವಿರುದ್ಧ ಹೋರಾಟ ಸೇರಿದಂತೆ ನಾಡು ನುಡಿಗಾಗಿ ಹಲವಾರು ಹೋರಾಟಗಳನ್ನು ನಡೆಸುವ ಮೂಲಕ ಸಕ್ರಿಯವಾಗಿದೆ ಎಂದು ತಿಳಿಸಿದರು.

ಪ್ರತಿ ವರ್ಷ ಸಂಘದಿಂದ ಆಚರಿಸುವ ರಾಜ್ಯೋತ್ಸವದಲ್ಲಿ ಕಲಾವಿದರಿಗೆ ಹಾಗೂ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದರೊಂದಿಗೆ ನಗರದೇವತೆ ಮುತ್ಯಾಲಮ್ಮ ದೇವಿಯ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ಯೋಗ ಪಟು ಎನ್.ದರ್ಶಿತ್‌ಗೌಡ, ಪೌರ ಕಾರ್ಮಿಕ ಮೇಸ್ತ್ರಿ ಭಗವಂತಪ್ಪ ಅವರನ್ನು ಸನ್ಮಾನಿಸಲಾಯಿತು.

ಜೆಡಿಎಸ್‌ ಹಿರಿಯ ಮುಖಂಡ ಎಚ್.ಅಪ್ಪಯ್ಯ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್‌ಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ವಾಣಿಜ್ಯೋದ್ಯಮಿ ಜೆ.ಸಿ.ನಾಗರಾಜ್, ಪರಿಷತ್‌ ತಾಲ್ಲೂಕು ಖಜಾಂಚಿ ಸಾ.ಲ.ಕಮಲನಾಥ್, ನಗರಸಭೆ ಸದಸ್ಯ ಬಂತಿವೆಂಕಟೇಶ್, ಪ್ರಭಾ ನಾಗರಾಜು, ರಾಜ ರಾಜೇಶ್ವರಿ ಕನ್ನಡ ಯುವಕ ಸಂಘದ ಗೌರವ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಕಾರ್ಯದರ್ಶಿ ಕೆ.ಸತೀಶ್, ಖಜಾಂಚಿ ಆರ್. ಶ್ರೀನಿವಾಸಮೂರ್ತಿ, ಚಂದ್ರು, ರಾಖೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT