ಸಿದ್ಧತೆ ಮುಖ್ಯ: ’ಗುಜರಾತ್ ರಾಜ್ಯದಿಂದ ಮೊದಲ ಬಾರಿಗೆ ಎರಡು ಸಾವಿರ ಸಸಿಗಳನ್ನು ತರಿಸಿ ಬೇಸಾಯ ಆರಂಭಿಸಿದೆ. ಈ ಬೆಳೆಗೆ ಭೂಮಿ ಸಿದ್ಧತೆ ಮುಖ್ಯ. ಡಿಸೆಂಬರ್ ತಿಂಗಳಲ್ಲಿ ಸಸಿಗಳನ್ನು ನಾಟಿ ಮಾಡುವ ಉದ್ದೇಶ ಇದ್ದರೆ ಕನಿಷ್ಠ ಒಂದು ತಿಂಗಳ ಹಿಂದಿನಿಂದಲೇ ಭೂಮಿ ಉಳುಮೆ ಮಾಡಿ ಸಿದ್ಧಗೊಳಿಸಬೇಕು. ಸಸಿ ನೆಡುವ ಸಿಮೆಂಟ್ ಅಥವಾ ಕಲ್ಲಿನ ಕಂಬದ ಸುತ್ತ ಕನಿಷ್ಠ ಎರಡು ಅಡಿಗಳಷ್ಟು ಮಣ್ಣಿನ ದಿಬ್ಬ ಮಾಡಿಕೊಂಡು ಬೇವು, ಹೊಂಗೆ ಹಿಂಡಿ, ಕುರಿ,ಮೇಕೆ ಹಾಗೂ ಸಗಣಿ ಗೊಬ್ಬರ ಸೇರಿಸಿ 20 ರಿಂದ 25 ದಿನಗಳವರೆಗೆ ಕಳೆಯಲು ಬಿಡಬೇಕು. ಇದಾದ ನಂತರ ಈ ಮೊದಲೇ ಬೆಳೆಸಿಕೊಂಡಿರುವ ಸಸಿಗಳನ್ನು ಒಂದು ಕಂಬದ ಸುತ್ತ ನಾಲ್ಕು ಸಸಿಗಳನ್ನು ನಾಟಿ ಮಾಡಬೇಕು. ಇದರ ಬಳ್ಳಿಗಳು ಕಂಬಕ್ಕೆ ತಾಗಿಕೊಂಡು ಬೆಳೆಯಲು ಸಹಕಾರಿಯಾಗುವಂತೆ ದಾರದಿಂದ (ಪ್ಲಾಸ್ಟಿಕ್ ದಾರ ಬಳಸಬಾರದು) ಕಟ್ಟಬೇಕು. ಸಸಿಗಳನ್ನು ನಾಟಿ ಮಾಡಿದ 14 ತಿಂಗಳ ನಂತರ ಗಿಡಗಳು ಬೆಳೆದು ಹೂವು ಬಿಟ್ಟು ಹಣ್ಣು ಸಿಗಲು ಆರಂಭವಾಗುತ್ತದೆ.ಒಂದು ಎಕರೆ ಪ್ರದೇಶದಲ್ಲಿ ಬೆಳೆಸಲು ಸುಮಾರು ಏಳು ಅಡಿ ಎತ್ತರ, ಒಂದು ಅಡಿ ಸುತ್ತಳತೆ 500 ಸಿಮೆಂಟ್ ಕಂಬಗಳು ಬೇಕು. ಸಿಮೆಂಟ್ ಕಂಬದ ತುದಿಯಲ್ಲಿ ಐದರಿಂದ ಆರು ಕಂಬಿಗಳನ್ನು ಛತ್ರಿಯಂತೆ ಬಿಡಬೇಕು. ಈ ಕಂಬಿಗಳಿಗೆ ಬೈಕ್ಗಳಿಗೆ ಬಳಸಿ ತೆಗೆದು ಹಾಕಲಾಗಿರುವ ಹಳೆ ಟೈರ್ಗಳನ್ನು ಇಡಬೇಕು. ಈ ಟೈರ್ಗಳ ಒಳಗಿನಿಂದ ಬಳ್ಳಿಗಳು ಹೊರಬರುವಂತೆ ಬೆಳೆಸಿದರೆ ಕೊಯ್ಲು ಮಾಡಲು, ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ರೈತ ಶ್ರೀನಿವಾಸ್ರೆಡ್ಡಿ .