ದೇವನಹಳ್ಳಿ: ಇಲ್ಲಿನ ಕೊಯಿರಾ ಕೆರೆ ಅಭಿವೃದ್ಧಿ ಕಾಮಗಾರಿಗೆ ಗ್ರಾಮಸ್ಥರೇ ಭಾನುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕೆರೆ ನಿರ್ಮಾಣದ ಇತಿಹಾಸ ತಿಳಿದಿಲ್ಲ. ಈಗ ಕೆರೆ ಬರಿದಾಗಿದ್ದು ಪುನರ್ ರೂಪಿಸುವ ಅಗತ್ಯವಿದೆ ಎಂದು ಎಂದು ಅಭಿಪ್ರಾಯಪಟ್ಟರು.
‘ಅಂತರ್ಜಲ ಕುಸಿದು ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಯುವಕರು ಸೇರಿ ಕೆರೆ ಅಭಿವೃದ್ಧಿಗೆ ಮುಂದಾಗಿದ್ದೇವೆ’ ಎಂದು ತಿಳಿಸಿದರು.
ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಕೊಯಿರಾ ಹರೀಶ್ ಮಾತನಾಡಿ, ಕೆರೆ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಶತಮಾನಗಳ ಕೆರೆಗಳನ್ನು ಅಭಿವೃದ್ಧಿಪಡಿಸಿ ಶಾಶ್ವತ ಜಲಮೂಲ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಮುಖಂಡ ಚಿಕ್ಕೆಗೌಡ ಮಾತನಾಡಿ, ಕಳೆದ ಹತ್ತು ದಿನಗಳಿಂದ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಳ್ಳುತ್ತಿರುವ ‘ಜಲಮೂಲ ಉಳಿಸಿ’ ವರದಿಯಿಂದ ಎಚ್ಚೆತ್ತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಗ್ರಾಮಸ್ಥರೆಲ್ಲರೂ ಸೇರಿ ಕೆರೆ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು.
19.18ಎಕರೆ ಕೆರೆ ವಿಸ್ತೀರ್ಣವಿದ್ದು ಕೆಲವರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಕೆಲವರು ಟ್ರ್ಯಾಕ್ಟರ್, ಜೆ.ಸಿ.ಬಿ, ಟಿಪ್ಪರ್, ಲಾರಿ ಬಾಡಿಗೆ ಇಲ್ಲದೆ ಮಣ್ಣು ರವಾನೆಗೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲಾಧಿಕಾರಿ ಕರೀಗೌಡ ಅವರು ಈ ಕೆಲಸಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೆ, ತಹಸೀಲ್ದಾರ್ ಮಂಜುನಾಥ್ ಕೂಡ ಈ ಅಭಿಯಾನಕ್ಕೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.
ಎಂ.ಪಿ.ಸಿ.ಎಸ್ ಅಧ್ಯಕ್ಷ ಎಚ್.ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ ಬಾಬು, ಮುನಿರಾಜು, ಮುಖಂಡ ಜೆ.ಸಿ.ಬಿ ರವಿಕುಮಾರ್, ಕೆ.ಎಂ. ವೆಂಕಟೇಶ್ ಇದ್ದರು.