ಆನೇಕಲ್: ‘ಆರೋಗ್ಯ ಮತ್ತು ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ಪ್ರತಿಯೊಬ್ಬರಿಗೂ ಈ ಸೌಲಭ್ಯಗಳು ದೊರೆಯುವಂತೆ ಮಾಡುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ’ ಎಂದು ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಿ.ಎಂ. ಸೀನಪ್ಪ ತಿಳಿಸಿದರು.
ತಾಲ್ಲೂಕಿನ ಗುಡ್ಡಹಟ್ಟಿಯಲ್ಲಿ ಅಂಕುರ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನಗೊಳಿಸುವ ಕಾರ್ಯ ಪ್ರಾರಂಭವಾಗಿದೆ. ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡ ಭಾಷೆಯನ್ನು ಬಳಕೆಗೆ ತರುವ ಅವಶ್ಯಕತೆಯಿದೆ. ಕನ್ನಡ ಭಾಷೆಯ ಬಗೆಗಿನ ಕೀಳರಿಮೆ ತೊರೆದು ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಅಂಕುರ ಫೌಂಡೇಷನ್ನ ಕಾರ್ಯದರ್ಶಿ ರಾಮಕೃಷ್ಣ ಮಾತನಾಡಿ, ನಿವೃತ್ತ ನ್ಯಾಯಾಧೀಶ ಸೀನಪ್ಪ ಅವರು ಕನ್ನಡದಲ್ಲಿ ಹೆಚ್ಚು ತೀರ್ಪುಗಳನ್ನು ನೀಡುವ ಮೂಲಕ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೆರೆದಿದ್ದಾರೆ. ಆನೇಕಲ್ ತಾಲ್ಲೂಕಿನ ಗುಡ್ಡಹಟ್ಟಿ ಗ್ರಾಮದವರೇ ಆದ ಸೀನಪ್ಪ ಅವರನ್ನು ಸಂಸ್ಥೆಯ ಮೂಲಕ ಅಭಿನಂದಿಸಿರುವುದು ಹೆಮ್ಮೆ ತಂದಿದೆ ಎಂದುಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಶ್ರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಕುಮಾರ್, ಮುಖಂಡರಾದ ರಘುಪತಿ ರೆಡ್ಡಿ, ನವೀನ್, ವಿಜಯಕುಮಾರಿ, ರಾಮಕೃಷ್ಣ, ಮಂಜುಳಾ ಜಯರಾಮ್, ಮುನೇಶ್, ಪ್ರಶಾಂತ್, ಯಶವಂತ್, ರಾಮಸ್ವಾಮಿ, ಅಂಕುರ ಫೌಂಡೇಷನ್ ಅಧ್ಯಕ್ಷೆ ಮಂಜುಳಾ ಹಾಜರಿದ್ದರು.