ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಪರಿಹಾರದ ಹಣ ನೀಡಲು ಒತ್ತಾಯ

ಜಿಲ್ಲಾಧಿಕಾರಿಗಳಿಂದ ಐದು ತಿಂಗಳ ಹಿಂದೆಯೇ ಆದೇಶ, ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
Last Updated 31 ಡಿಸೆಂಬರ್ 2019, 13:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ರಾಷ್ಟ್ರೀಯ ಹೆದ್ದಾರಿ 207 (648) ನಿರ್ಮಾಣಕ್ಕಾಗಿ ಮೊದಲನೇ ಹಂತದಲ್ಲಿ ಭೂಮಿ ನೀಡಿರುವ ಭೂಮಾಲೀಕರಿಗೆ ನೀಡಬೇಕಾದ ಪರಿಹಾರ ಮೊತ್ತ ಹಾಗೂ ವಿಳಂಬಕ್ಕಾಗಿ ಬಡ್ಡಿ ನೀಡುವಂತೆ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿ ಐದು ತಿಂಗಳಾದರೂ ಪರಿಹಾರ ನೀಡಿಲ್ಲ. ಈ ದಿಸೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಭೂಮಿ, ಮನೆ ಮತ್ತು ನಿವೇಶನ ಕಳೆದುಕೊಂಡಿರುವ ಮಾಲೀಕರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿ.ಎಚ್.ರಾಮಕೃಷ್ಣ ಒತ್ತಾಯಿಸಿದ್ದಾರೆ.

ಹೊಸಕೋಟೆ ದಾಬಾಸ್‍ಪೇಟೆ ರಾಷ್ಟ್ರೀಯ ಹೆದ್ದಾರಿ-207 (648) ನಿರ್ಮಾಣಕ್ಕೆ ಜಮೀನು ನೀಡಿರುವ ಭೂ ಮಾಲೀಕರಿಗೆ ಪರಿಹಾರ ವಿಳಂಬ ಕುರಿತಂತೆ ಭೂ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

‘ಹೊಸಕೋಟೆ ದಾಬಾಸ್‍ಪೇಟೆ ರಾಷ್ಟ್ರೀಯ ಹೆದ್ದಾರಿ 2012-13ನೇ ಸಾಲಿನಲ್ಲಿ ಅಧಿಸೂಚನೆಯಾಗಿದೆ. ನಿರ್ಮಾಣ ಹಂತದಲ್ಲಿರುವ ಹೆದ್ದಾರಿಗೆ ಮೊದಲನೇ ಹಂತದಲ್ಲಿ ಎಡಬದಿಯಲ್ಲಿ ಒಟ್ಟು 150 ಅಡಿ ಭೂ ಸ್ವಾಧೀನ ಮಾಡಲಾಗಿದೆ. ಈ ಮೊದಲು ಒಂದು ಎಕರೆ ಭೂಮಿಗೆ ₹ 40 ಲಕ್ಷ, ನಿವೇಶನಕ್ಕೆ ಒಂದು ಚದರಡಿಗೆ ₹ 325 ಗಳಂತೆ ಪರಿಹಾರ ನೀಡಲಾಗಿತ್ತು. ಪರಿಹಾರ ಹಣ ಪಡೆದ ಭೂಮಾಲೀಕರು ಮತ್ತೆ ಜಿಲ್ಲಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಈ ಹಿಂದೆ ನೀಡಿದ ಭೂ ಸ್ವಾಧೀನ ಅಧಿಕಾರಿಗಳು ನೀಡಿದ್ದ ಪರಿಹಾರ ಮೊತ್ತದ ಶೇ 80 ಮತ್ತು ಕೆಲವರಿಗೆ ಶೇ 100ರಷ್ಟು ಹಣ ಮತ್ತು ಅದಕ್ಕೆ ಶೇ 9ರಷ್ಟು ಬಡ್ಡಿ ನೀಡಲು ಆದೇಶಿಸಿದ್ದರು. ಆದೇಶವನ್ನು ನೀಡಿ ಐದು ತಿಂಗಳಾದರೂ ಭೂಮಾಲೀಕರಿಗೆ ಹಣ ದೊರೆತಿಲ್ಲ’ ಎಂದರು.

‘ಸ್ವಾಧೀನಪಡಿಸಿಕೊಂಡಿರುವ ವಿಸ್ತೀರ್ಣಕ್ಕೆ ಸರ್ಕಾರ ನಿಗದಿಪಡಿಸಿರುವ ಬೆಲೆ 1 ಗುಂಟೆಗೆ ₹ 1.20 ಲಕ್ಷ. ಆದರೆ 1 ಗುಂಟೆ ಭೂಮಿ ₹ 8ರಿಂದ ₹ 10 ಲಕ್ಷ ಬೆಲೆ ಬಾಳುತ್ತದೆ. ಸರ್ಕಾರದ ಕಡಿಮೆ ಪರಿಹಾರ ಮೊತ್ತದಲ್ಲಿ ನಿವೇಶನ ಮತ್ತು ಮನೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಪರಿಹಾರ ಮೊತ್ತ ಹೆಚ್ಚಿಸಬೇಕು. ಭೂಸ್ವಾಧೀನ ಕಾಯ್ದೆ ಪ್ರಕಾರ ಕನಿಷ್ಠ ನಾಲ್ಕು ಪಟ್ಟು ಭೂಮಾಲೀಕರಿಗೆ ಪರಿಹಾರ ಹಣವು ಸಿಗಬೇಕಿತ್ತು. ಈಗ ಕೇಳಲು ಹೋದರೆ ಜಮೀನು ನೀಡಿದ ಮೂರು ವರ್ಷದೊಳಗೆ ತಕರಾರು ಸಲ್ಲಿಸಬೇಕಿತ್ತು ಎನ್ನುತ್ತಿದ್ದಾರೆ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ’ ಎಂದರು.

ಕಾಮಗಾರಿ ಪೂರ್ಣಗೊಳಿಸಿ: ಏಳು ವರ್ಷಗಳಿಂದ ಭೂಮಿ ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ಸಿಗಲಿಲ್ಲ. ಹೆದ್ದಾರಿ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಇದರಿಂದ ಹೆದ್ದಾರಿಯಲ್ಲಿ ಓಡಾಡುವ ವಾಹನಗಳು ಅಪಘಾತಕ್ಕೆ ಈಡಾಗಿ ಸಾವು ನೋವುಗಳು ಸಂಭವಿಸುತ್ತಿವೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಭೂಮಿ ಕಳೆದುಕೊಂಡ ಮಾಲೀಕರು, ಈ ಭಾಗದ ಜನತೆ ಸೇರಿ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿದ್ದ ಮುಖಂಡರು ಎಚ್ಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಖಜಾಂಚಿ ವಿಜಯ ಕುಮಾರ್, ಮುಖಂಡರಾದ ಡಾ.ಮುನಿಯಪ್ಪ, ಸಿ.ಆರ್.ಮುನಿರಾಜು, ವೆಂಕಟೇಶ್, ಮಧು, ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT