ದೇವನಹಳ್ಳಿ: ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಮಲಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಫಾಯಿ ಕರ್ಮಚಾರಿ ಸಮಿತಿ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್ ಮಾಹಿತಿ ನೀಡಿ, 2013 ರ ಅನ್ವಯ ಸರ್ಕಾರಿ ಆದೇಶದಂತೆ ಜಿಲ್ಲಾ ಜಾಗೃತಿ ದಳದ ಸಮಿತಿ ಹಾಗೂ ವಿಭಾಗೀಯ ಜಾಗೃತಿ ದಳದ ಸಮಿತಿಗಳಲ್ಲಿ ಸಫಾಯಿ ಕರ್ಮಚಾರಿಗಳ ಸಮುದಾಯದವರನ್ನು ಸದಸ್ಯರನ್ನಾಗಿ ನೇಮಿಸಿ ಕನಿಷ್ಠ ತಿಂಗಳಿಗೊಮಗ್ಮೆ ಸಭೆ ನಡೆಸಬೇಕು. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರತ ಪೌರಕಾರ್ಮಿಕರ ಅರೆಕಾಲಿಕ ಕೆಲಸವನ್ನು ಕಾಯಂ ಮಾಡಿ ಸೇವಾಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ನೌಕರರಿಗೆ ಉಚಿತ ನಿವೇಶನ, ವಸತಿ ಭಾಗ್ಯ ನೀಡಿ ಮೂಲಸೌಲಭ್ಯವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ ಜಿಲ್ಲಾ ಸಂಚಾಲಕ ಮ್ಯಾಥ್ಯು ಮುನಿಯಪ್ಪ ಮಾತನಾಡಿ, ಮೂರು ವರ್ಷಗಳಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ 175 ಜನ ಪರಿಶಿಷ್ಟ ಜಾತಿ ಮ್ಯಾನುವಲ್ ಸ್ಕ್ಯಾವೆಂಜರ್ ಗಳಿದ್ದಾರೆ, ಇವರಿಗೆ ಕಾರ್ಮಿಕ ಇಲಾಖೆ ಗುರುತಿನ ಚೀಟಿ ನೀಡಿಲ್ಲ ಎಂದರು.
ಮಲ ಹೊರುವ, ಮಲಬಾಚುವ ಪದ್ಧತಿ ಅಮಾನವೀಯ, ಸರ್ಕಾರದ ಪ್ರಾಯೋಜಿತ ಜೀತ ಪದ್ಧತಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಇದನ್ನು ಅರ್ಥ ಮಾಡಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಉಸ್ತುವಾರಿ ಸದಸ್ಯೆ ಪದ್ಮಾ, ತಾಲ್ಲೂಕು ಘಟಕ ಅಧ್ಯಕ್ಷ ಆರ್.ಲಕ್ಷ್ಮಣ್ ಇದ್ದರು.