ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆದ ಗೊಲ್ಲಹಳ್ಳಿತಾಂಡ ಗ್ರಾಮಸ್ಥರು

Published 26 ಏಪ್ರಿಲ್ 2024, 13:55 IST
Last Updated 26 ಏಪ್ರಿಲ್ 2024, 13:55 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವಿವಿಧ ಬೇಡಿಕೆ ಈಡೇರದ ಕಾರಣ ಹಾಗೂ ಶಾಸಕರು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮತದಾನ ಬಹಿಷ್ಕಾರ ಹಾಕಿ  ಪ್ರತಿಭಟನೆ ನಡೆಸಿದ ತಾಲ್ಲೂಕಿನ ತೂಬಗೆರೆ ಹೋಬಳಿಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೊಲ್ಲಹಳ್ಳಿ ತಾಂಡ ಗ್ರಾಮಸ್ಥರು, ತಹಶೀಲ್ದಾರ್‌ ಭರವಸೆ ಬಳಿಕ ಮತದಾನ ಮಾಡಿದರು.

ಗ್ರಾಮದಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು, ಸಮುದಾಯ ಭವನ, ಸಾಗುವಳಿ ಚೀಟಿ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಯಾರಿಂದಲೂ ಸ್ಪಂದನೆ ದೊರೆಯುತ್ತಿಲ್ಲ.

ತಾಲ್ಲೂಕಿನಲ್ಲಿರುವ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕೊನೆಯ ಗ್ರಾಮಗಳ ಸಮಸ್ಯೆ ಬಗ್ಗೆ ದೊಡ್ಡಬಳ್ಳಾಪುರ ಶಾಸಕರು ಗಮನವಹಿಸುವುದಿಲ್ಲ. ದೇವನಹಳ್ಳಿಯ ಶಾಸಕರೂ ವಹಿಸದೇ ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ಬೇಡಿಕೆಗಳ ಬಗ್ಗೆ ಸ್ಪಷ್ಟ ಭರವಸೆ ದೊರೆಯುವವರೆಗೂ ಗ್ರಾಮದ ಯಾರು ಸಹ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಗ್ರಾಮದಲ್ಲಿ 380 ಮತಗಳಿದ್ದು ಇಡೀ ಗ್ರಾಮಸ್ಥರು ಒಕ್ಕೊರಲಿನಿಂದ ಮತದಾನ ಬಹಿಷ್ಕರಿಸುವ ನಿರ್ಧಾರ ಕೈ ಕೊಂಡಿದ್ದೇವೆ. ಗ್ರಾಮದ ಸಮಸ್ಯೆಗಳು ಬಗೆಹರಿಸುವವರೆಗೂ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾನ ಬಹಿಷ್ಕಾರದ ಬ್ಯಾನ‌ರ್‌ನೊಂದಿಗೆ ಮತಗಟ್ಟೆಗೆ ತೆರಳದೆ ರಸ್ತೆ ಬದಿಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಧರಣಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ವಿಭಾವಿದ್ಯಾರಾಥೋಡ್‌, ಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸಾಧಿಕ್‌ ಪಾಷ ಮನವೊಲಿಸುವ ಯತ್ನ ನಡೆಸಿದರು.

ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಬೇಡಿಕೆಗಳ ಕುರಿತು ಚುನಾವಣೆ ಮುಕ್ತಾಯವಾದ ನಂತರ ಸಭೆ ನಡೆಸುವ ಕುರಿತು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಅಂತ್ಯಗೊಳಿಸಿ ಮತದಾನದಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT