ಈ ಗಿಡದ ಚಕ್ಕೆಯನ್ನು ಅಡಕೆಯ ಬದಲಾಗಿ ಎಲೆಯೊಂದಿಗೆ ತಾಂಬೂಲದ ಜೊತೆಯಲ್ಲಿ ಜಗಿಯಲು ಈ ಹಿಂದೆ ಹಿರಿಯರು ಬಳಸುತ್ತಿದ್ದರು. ಈಗಲು ಕೆಲವರು ಅಡಿಕೆ ಬೇಯಿಸುವ ಸಂದರ್ಭದಲ್ಲಿ ತಂಗಡಿ ಚೆಕ್ಕೆ ಹಾಕಿ ಬೇಯಿಸುತ್ತಾರೆ. ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಕೈ, ಕಾಲು, ಕಣ್ಣು ಉರಿಯಲು ಪ್ರಾರಂಭವಾದಾಗ ಬೇಯಿಸಿದ ಹರಳೆಣ್ಣೆ ತಲೆಗೆ ಹಚ್ಚಿ ತಂಗಡಿ ಸೊಪ್ಪನ್ನು ತಲೆಗೆ ಕಟ್ಟಿಕೊಂಡರೆ ಸಾಕು. ದೇಹದ ಉಷ್ಣಾಂಶ ಕಡಿಮೆಯಾಗಿ ಸಮತೋಲನವಾಗುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಕೆಲವರು ರೂಢಿಸಿಕೊಂಡು ಬಂದಿದ್ದಾರೆ. ಆದರೆ ಅನೇಕರಿಗೆ ತಂಗಡಿ ಗಿಡ, ಹೂವು, ಸೊಪ್ಪು ಹಾಗೂ ಚೆಕ್ಕೆಯ ಮಹತ್ವ ತಿಳಿದಿಲ್ಲ ಎನ್ನುತ್ತಾರೆ ನಾರಾಯಣಪ್ಪ.