ದೇವನಹಳ್ಳಿ: ನಗರದಲ್ಲಿ ಭಾನುವಾರ ಲಾಕ್ಡೌನ್ ಜಾರಿಯಲ್ಲಿತ್ತು. ಆದರೆ, ಲಾಕ್ಡೌನ್ನ ಯಾವ ನಿಯಮಗಳು ಪಾಲನೆ ಆಗಲಿಲ್ಲ.
ನಗರದಲ್ಲಿರುವ ಬಹುತೇಕ ಕುರಿ, ಕೋಳಿ, ಮೀನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು. ಆದರೆ, ಯಾರೊಬ್ಬರೂ ಅಂತರ ಕಾಯ್ದುಕೊಂಡಿರಲಿಲ್ಲ. ಅಂಗಡಿ ಮಾಲೀಕರೂ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವಂತೆ ಗ್ರಾಹಕರಿಗೆ ಸೂಚನೆ ನೀಡಲಿಲ್ಲ. ಅಂಗಡಿಗಳ ಸಿಬ್ಬಂದಿಯೇ ಮಾಸ್ಕ್ ಧರಿಸಿರಲಿಲ್ಲ.
ಆಯಕಟ್ಟಿನ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ವೇಣುಗೋಪಾಲಸ್ವಾಮಿ ದೇವಾಲಯ ಮುಖ್ಯ ರಸ್ತೆ, ಹಳೇ ತಾಲ್ಲೂಕು ಕಚೇರಿ ರಸ್ತೆ, ಹಳೇ ಮತ್ತು ಹೊಸ ಬಸ್ ನಿಲ್ದಾಣ, ಸೂಲಿಬೆಲೆ ರಸ್ತೆ ಅಕ್ಕಪಕ್ಕದ ಬೀದಿಗಳು ನಿರ್ಜನವಾಗಿದ್ದವು. ಆಯಕಟ್ಟಿನ ಸ್ಥಳದಲ್ಲಿ ಪೊಲೀಸರು ನಿಯೋಜನೆಗೊಂಡಿದ್ದರು. ಪೊಲೀಸ್ ಗಸ್ತುವಾಹನ ಎಲ್ಲೆಡೆ ಸುತ್ತಾಡುತ್ತಿದ್ದವು.
ಯಾವುದೇ ಬಸ್, ಆಟೋ, ಸರಕು ಸಾಗಾಣಿಕೆ ವಾಹನಗಳ ಸಂಚಾರ ಇರಲಿಲ್ಲ.ಔಷಧಿ ಅಂಗಡಿ ಮತ್ತು ಆಸ್ಪತ್ರೆಗಳು ಮಾತ್ರ ತೆರೆದಿದ್ದವು.