ದೇವನಹಳ್ಳಿ: ‘ಸರ್ಕಾರದಿಂದ ಪಡಿತರ ಯೋಜನೆ ಮೂಲಕ ಉಚಿತವಾಗಿ ನೀಡುವ ಅಕ್ಕಿಯನ್ನು ಪಡಿತರ ಚೀಟಿದಾರರು ಮಾರಾಟ ಮಾಡುವುದು ಅಪರಾಧ. ಅಂತಹವರ ಧಾನ್ಯ ವಿತರಣೆ ರದ್ದುಪಡಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಬಡಜನತೆಯನ್ನು ಹಸಿವಿನಿಂದ ಮುಕ್ತಗೊಳಿಸಿ, ಅರ್ಥಿಕವಾಗಿ ಚೇತರಿಸಿಕೊಳ್ಳುವಂತೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ. ಹಾಗಾಗಿ ಆಹಾರ ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದ್ದು ಪಡಿತರ ಎತ್ತುವಳಿ, ನ್ಯಾಯಬೆಲೆ ಅಂಗಡಿಗಳಲ್ಲಿನ ವಿತರಣೆ, ಪಡತರ ಚೀಟಿದಾರರಿಗೆ ಆಹಾರಧಾನ್ಯ ತಲುಪಿರುವ ಬಗ್ಗೆ ಪ್ರತಿಯೊಂದು ವಿವರಗಳು ಆನ್ಲೈನ್ ಮೂಲಕ ದಾಖಲಾಗುತ್ತಿದೆ’ ಎಂದು ಹೇಳಿದರು.
‘ಪಡಿತರ ಚೀಟಿದಾರರಿಗೆ ಹಂಚಿಕೆಯಾದ ಆಹಾರಧಾನ್ಯಗಳು ನೇರವಾಗಿ ಅವರ ಕುಟುಂಬಕ್ಕೆ ತಲುಪಬೇಕೆಂಬ ಉದ್ದೇಶದಿಂದ ಆಯಾ ಕುಟುಂಬದ ಸದಸ್ಯರು ಬಯೋ ಮೆಟ್ರಿಕ್ ಮೂಲಕ ಪಡಿತರ ವಸ್ತುಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದ್ದು, ಎಲ್ಲವನ್ನೂ ಪಾರದರ್ಶಕವಾಗಿ ಮಾಡಲಾಗುತ್ತಿದೆ’ ಎಂದರು.
‘ಕಾಳಸಂತೆಕೋರರು ನಿರ್ದಿಷ್ಟ ದಿನಗಳಂದು ಗ್ರಾಮಗಳಿಗೆ ಭೇಟಿ ನೀಡಿ ಪಡಿತರ ಚೀಟಿದಾರರಿಂದ ಅಕ್ಕಿ ಖರೀದಿಸುತ್ತಿರುವುದಾಗಿ ದೂರುಗಳು ಬಂದಿವೆ. ಎಲ್ಲ ತಹಶೀಲ್ದಾರರಿಗೆ ಸೂಚನೆ ನೀಡಿ ಆಹಾರ ಶಾಖೆ ಸಿಬ್ಬಂದಿಯನ್ನು ಜಾಗೃತಗೊಳಿಸಿ, ಹೆಚ್ಚು ನಿಗಾವಹಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕಾಳಸಂತೆಕೋರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ’ ಎಂಧು ತಿಳಿಸಿದರು.
‘ಸಿಬ್ಬಂದಿ ವಿಷಯ ತಿಳಿದೂ ಕಾರ್ಯಪ್ರವೃತ್ತರಾಗದಿದ್ದರೆ, ಅಂತಹವರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಪೊಲೀಸ್ ಅಧಿಕಾರಿಗಳು ಅನಿರೀಕ್ಷಿತ ಕಾರ್ಯಾಚರಣೆ ನಡೆಸಿ ಕಾಳಸಂತೆಕೋರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸ್ಥಳೀಯವಾಗಿ ಸಾರ್ವಜನಿಕರೂ ಯಾವುದೇ ಗ್ರಾಮದಲ್ಲಿ ಅಕ್ರಮ ಚಟುವಟಿಕೆ ಕಂಡುಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ ಅಥವಾ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಮಾಹಿತಿ ನೀಡಬಹುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.