ಹೊಸಕೋಟೆ: ಕಳೆದ ಡಿಸೆಂಬರ್ ನಗರದ ವಿವಿಧ ದೇವಸ್ಥಾನಗಳಲ್ಲಿ ಹನುಮ ಜಯಂತಿಯಂದು ಪ್ರಸಾದ ಸೇವಿಸಿ 280ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆ ಸೇರಿದ ಪ್ರಕರಣ ನಗರದಲ್ಲಿ ತಲ್ಲಣ ಸೃಷ್ಟಿಸಿತ್ತು. ಆದರೆ ಈ ಘಟನೆ ನಡೆದ ಹತ್ತು ದಿನ ಕಳೆಯುತ್ತಿದ್ದರೂ, ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಘಟನೆಗೆ ಸಂಬಂಧಿಸಿದಂತೆ ಅಸ್ವಸ್ಥರು ಸೇವಿಸಿದ್ದ ಪ್ರಸಾದ, ಮಲ ಮತ್ತು ವಾಂತಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಈವರೆಗೂ ಪರೀಕ್ಷೆಯ ವರದಿ ಬಾರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಕೇಳಿ ಎನ್ನುತ್ತಿದ್ದಾರೆ. ಆದರೆ ಡಿಎಚ್ಒ ಇದುವರೆಗೆ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಇನ್ನೂ ತಾಲ್ಲೂಲು ಆರೋಗ್ಯಾಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಿದ್ದಾರೆ.
ಆಸ್ಪತ್ರೆ ಸೇರಿದ್ದವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿರುವುದು
ವರದಿ ಬಂದಿದ್ದರೂ ಅದನ್ನು ಸಾರ್ವಜನಿಕರಿಗೆ ತಿಳಿಸದೆ, ಮುಚ್ಚಿಡಲಾಗುತ್ತಿದೆ ಎಂಬ ಆರೋಪವು ಜಿಲ್ಲಾ ಆರೋಗ್ಯ ಇಲಾಖೆ ಮೇಲೆ ಇದೆ. ಘಟನೆಯ ಕಾರಣವನ್ನು ಏಕೆ ನಿಗೂಢವಾಗಿ ಇರಿಸಲಾಗಿದೆ ಎಂಬ ಅನುಮಾನಗಳು ಸ್ಥಳೀಯರನ್ನು ಕಾಡುತ್ತಿದೆ.
ಘಟನೆ ನಡೆದು ಸುಮಾರು 10 ದಿನಗಳು ಕಳೆದರೂ ಪ್ರಯೋಗಾಲಯದ ವರದಿ ಇನ್ನೂ ದೊರೆತಿಲ್ಲ, ಅಥವಾ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.
ನಗರದ ಚರಂಡಿಗಳಲ್ಲಿ ಕಪ್ಪುಗಟ್ಟಿದ ಚರಂಡಿ ನೀರು.
ಅಧಿಕಾರಿಗಳ ಉದಾಸೀನ:
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವೃದ್ದೆ ಬೇರೆ ಕಾರಣಕ್ಕೆ ಮೃತಪಟ್ಟಿದ್ದಾರೆ. ಪ್ರಸಾದ ಸೇವನೆಯಿಂದ ಅಲ್ಲ. ಯಾರಿಗೂ ತೊಂದರೆಯಾಗದೆ ಘಟನೆ ಸುಖಾಂತ್ಯವಾಗಿದೆ. ಇದರ ಕುರಿತು ನಾವು ಮರೆತಿದ್ದೇವೆ ಎಂದು ಅಧಿಕಾಕಾರಿಗಳು ಹೇಳುತ್ತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.