ಆನೇಕಲ್: ಆನೇಕಲ್ ತಹಶೀಲ್ದಾರ್ ಆಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾರಿದಳ ತಹಶೀಲ್ದಾರ್ ಆಗಿದ್ದ ಶಿವಪ್ಪ ಎಚ್. ಲಮಾಣಿ ವರ್ಗಾವಣೆಗೊಂಡಿದ್ದು, ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ತಹಶೀಲ್ದಾರ್ ಆಗಿದ್ದ ಪಿ. ದಿನೇಶ್ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಆಗಿ ವರ್ಗಾವಣೆಯಾಗಿದ್ದು ನೂತನ ತಹಶೀಲ್ದಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ತಾಲ್ಲೂಕು ಕಚೇರಿಯ ಸಿಬ್ಬಂದಿ ವರ್ಗಾವಣೆಗೊಂಡ ತಹಶೀಲ್ದಾರ್ ಅವರಿಗೆ ಬೀಳ್ಕೊಡುಗೆ ನೀಡಿದರು.
ದಿನೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಅಧಿಕಾರದಲ್ಲಿದ್ದ ಎರಡು ವರ್ಷದ ಅವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು, ಕೋವಿಡ್ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳು ತೃಪ್ತಿ ತಂದಿವೆ ಎಂದರು.
ತಹಶೀಲ್ದಾರ್ ಶಿವಪ್ಪ ಎಚ್. ಲಮಾಣಿ ಮಾತನಾಡಿ, ತಾಲ್ಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸಲು ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸಹಕಾರ ನೀಡಬೇಕು. ಈ ಮೂಲಕ ಜನಸ್ನೇಹಿ ಆಡಳಿತ ನೀಡಲು ಸಹಕರಿಸಬೇಕು ಎಂದು ಕೋರಿದರು.
ವಿಶೇಷ ತಹಶೀಲ್ದಾರ್ ವೆಂಕಟಚಲಾಪತಿ, ಉಪ ತಹಶೀಲ್ದಾರ್ಗಳಾದ ಭಾಗ್ಯ, ಮಹೇಶ್, ಚಂದ್ರಶೇಖರ್, ಶಿರಸ್ತೇದಾರ್ಗಳಾದ ಚಂದ್ರಶೇಖರ್, ಚೇತನ್, ದಿನಕರ್ ಹಾಜರಿದ್ದರು.