ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಿಂದ ನಿರ್ದಿಷ್ಟ ಆದಾಯ: ಶಾಸಕ ಶರತ್ ಬಚ್ಚೇಗೌಡ

ಚಿಕ್ಕ ಹುಲ್ಲೂರುನಲ್ಲಿ ಪಶು ಆಸ್ಪತ್ರೆ ಉದ್ಘಾಟಿಸಿದ ಶಾಸಕ ಶರತ್ ಬಚ್ಚೇಗೌಡ
Last Updated 13 ಏಪ್ರಿಲ್ 2021, 3:31 IST
ಅಕ್ಷರ ಗಾತ್ರ

ಹೊಸಕೋಟೆ: ‘ಈಗಿನ ನೀರಿನ ಪರಿಸ್ಥಿತಿಯಲ್ಲಿ ರೈತರು ಬೆಳೆಯುವ ಬೆಳೆಯಿಂದ ನಿರ್ದಿಷ್ಟ ಆದಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಹೈನುಗಾರಿಕೆಯಿಂದ ಪ್ರತಿ ತಿಂಗಳು ನಿರ್ದಿಷ್ಟವಾದ ಆದಾಯವನ್ನು ನಿರೀಕ್ಷಿಸಬಹುದಾಗಿದೆ’ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲ್ಲೂಕಿನ ಚೊಕ್ಕಹಳ್ಳಿ ಪಂಚಾಯಿತಿಯ ಚಿಕ್ಕ ಹುಲ್ಲೂರು ಗ್ರಾಮದಲ್ಲಿ ಪಶು ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾವಿರಾರು ಅಡಿ ಆಳಕ್ಕೆ ತೋಡಿಸಿದ ಕೊಳವೆಬಾವಿ ನೀರು ಯಾವಾಗ ಬೇಕಾದರೂ ಬತ್ತಿಹೋಗಿ ರೈತರು ಬೆಳೆದ ಬೆಳೆಗಳು ಹಾಳಾಗುತ್ತದೆ. ಆದರೆ ಮನೆಯಲ್ಲಿ ಸಾಕಿದ ಒಂದು ಅಥವಾ ಎರಡು ಹಸುಗಳಿಂದ ಪ್ರತಿ ನಿತ್ಯ ಬರುವ ಹಾಲನ್ನು ಡೇರಿಗೆ ಹಾಕಿ ಮನೆಯ ಹೆಣ್ಣುಮಕ್ಕಳು ನಿದಿಷ್ಟ ವರಮಾನ ಪಡೆಯುತ್ತಾರೆ’ ಎಂದರು.

‘ಈ ಭಾಗದ ರೈತರಿಗೆ ಪಶು ಆಸ್ಪತ್ರೆಯ ಕೊರತೆಯಿತ್ತು. ಮೂಕ ಪ್ರಾಣಿಗಳಿಗೆ ಬರುವ ಕಾಯಿಲೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಲಾಗದೆ ಪರದಾಡುತ್ತಿದ್ದ ರೈತರ ಅನುಕೂಲಕ್ಕಾಗಿ ಸುಮಾರು ₹35 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯನ್ನು ಕೇವಲ ಮೂರು ತಿಂಗಳಿನಲ್ಲಿ ಕಟ್ಟಲಾಗಿದೆ’ ಎಂದರು.

38 ಕೆರೆಗಳಿಗೆ ನೀರು: ‘ಜಡಗೇನಹಳ್ಳಿ ಹಾಗೂ ಅನುಗೊಂಡನಹಳ್ಳಿ ಹೋಬಳಿಗಳ 38 ಕೆರೆಗಳಿಗೆ ಮುಂದಿನ ವರ್ಷದ ಆಗಸ್ಟ್ ಹೊತ್ತಿಗೆ ನೀರು ತುಂಬಿಸುವ ಕೆಲಸವಾಗಿತ್ತದೆ. ಆದರೆ ನಂದಗಗುಡಿ ಹಾಗೂ ಕಸಬಾದ ಕೆರೆಗಳಿಗೆ ಕೆಸಿ ವ್ಯಾಲಿಯ ನೀರಿನಿಂದ ಕೆರೆಗಳಿಗೆ ನೀರು ಬರಬೇಕಾಗಿದೆ. ಅದು ಈಗಾಗಲೇ ತಾವರೆಕೆರೆವರೆಗೆ ಬಂದಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳೂ ತುಂಬಿ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ದ್ಧಿಯಾಗುತ್ತದೆ’ ಎಂದರು.

ಬೆಂಗಳೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಹುಲ್ಲೂರು ಮಂಜುನಾಥ್ ಮಾತನಾಡಿ, ‘ಮೂಕ ಪ್ರಾಣಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಹಸುಗಳು ಗಂಡು ಕರುಗಳನ್ನು ಹಾಕಿದರೆ ಅದನ್ನು ಮನೆಯಿಂದ ಹೊರಹಾಕದೆ ಅದನ್ನೂ ನಾವೇ ಸಾಕಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರವು ಪ್ರತಿ ತಾಲ್ಲೂಕಿಗೆ ಗೋವಿನ ಆಶ್ರಮವನ್ನು ಕಟ್ಟಿಸುವ ಆಶ್ವಾಸನೆ ನೀಡಿದ್ದು ಆಗ ಅದನ್ನು ನಾವು ಉಪಯೋಗಿಸಿಕೊಳ್ಳಬಹುದು’ ಎಂದರು.

ಚಿಕ್ಕ ಹುಲ್ಲೂರು ಗ್ರಾಮದ ಅಂಗವನಾಡಿ ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಲಾಯಿತು. ಚೊಕ್ಕಹಳ್ಳಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ಜನಾಂಗದವರಿಗೆ ಸಾವಿರ ಲೀಟರ್‌ ನೀರಿನ ಟ್ಯಾಂಕ್‌ ಗಳನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಯಿತು. ಪ್ರತಿ ಮನೆಗೆ ಕಸದ ಬುಟ್ಟಿಗಳನ್ನೂ ಸಹಾ ವಿತರಿಸಿದರು.

ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ರೂಪ ಮರಿಯಪ್ಪ, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಶ್ರೀನಿವಾಸ್, ಟಿಎಪಿಸಿಎಂಎಸ್ ಆಧ್ಯಕ್ಷ ಎಲ್ ಆ್ಯಂಡ್ ಟಿ. ಮಂಜುನಾಥ್, ಚೊಕ್ಕಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳ ನಾಗಾರ್ಜುನ್, ಮುಖಂಡರಾದ ಬಚ್ಚೇಗೌಡ, ಬಂಗಾರಪ್ಪ, ರಾಮೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT