ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತಯಂತ್ರ (ಇವಿಎಂ), ವಿ.ವಿ. ಪ್ಯಾಟ್ ಇರಿಸಲಾದ ಸ್ಟ್ರಾಂಗ್ ರೂಂ ಭದ್ರತೆಗಾಗಿ ಕಿಟಕಿ, ಬಾಗಿಲುಗಳಿಗಾಗಿ ಹಾಕಲಾಗಿದ್ದ ತಗಡಿನ ಶೀಟ್ ಕಳಚಿ ಬಿದ್ದಿದ್ದು, ಅವನ್ನು ಮತ್ತೆ ಸರಿಪಡಿಸಲಾಗಿದೆ.
ಮುದುಗುರ್ಕಿ ಬಳಿ ಇರುವ ನಾಗಾರ್ಜುನ ಕಾಲೇಜಿನಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲ ಇವಿಎಂ ಯಂತ್ರ, ವಿವಿ ಪ್ಯಾಟ್ ಯಂತ್ರಗಳನ್ನು ಇರಿಸಲಾಗಿದೆ.
ಸ್ಟ್ರಾಂಗ್ ರೂಂಗಳಲ್ಲಿ ಇಡಲಾದ ಮತಯಂತ್ರಗಳ ಭದ್ರತೆ ದೃಷ್ಟಿಯಿಂದ ಕೊಠಡಿಗಳ ಕಿಟಿಕಿ, ಬಾಗಿಲುಗಳನ್ನು ಮುಚ್ಚಿ, ಅವುಗಳ ಮೇಲೆ ಲೋಹದ ತಗಡು ಶೀಟ್ ಅಳವಡಿಸಲಾಗಿದೆ. ತಗಡುಗಳನ್ನು ಸರಿಯಾಗಿ ಅಳವಡಿಸದ ಕಾರಣ ಶೀಟ್ ಕಳಚಿ ಬಿದ್ದು, ಸ್ಟ್ರಾಂಗ್ ರೂಂ ಕಿಟಿಕಿಗಳು ತೆರೆದಿದ್ದವು.
ಇದನ್ನು ಗಮನಿಸಿದ ಅಧಿಕಾರಿಗಳು ರಾಜಕೀಯ ಪಕ್ಷಗಳ ಏಜೆಂಟ್ರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮತ್ತೆ ಶೀಟ್ ಸರಿಯಾಗಿ ಅಳವಡಿಸಿದ್ದಾರೆ.
ತಗಡು ಕಳಚಿ ಬಿದ್ದಿದ್ದ ಕೊಠಡಿಯಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ ಎಂದು ರಾಜಕೀಯ ಮುಖಂಡರು ಆರೋಪಿಸಿದ್ದಾರೆ.
ಕೊಠಡಿಗಳಿಗೆ ಅಳವಡಿಸಿದ್ದ ಲೋಹದ ತಗಡು ಕಳಚಿಕೊಳ್ಳಲು ಹೇಗೆ ಸಾಧ್ಯ?. ಸ್ಟ್ರಾಂಗ್ ರೂಂ ಭದ್ರತೆ ನೋಡಿಕೊಳ್ಳುವ ಸಿಬ್ಬಂದಿ ವೈಫಲ್ಯದಿಂದ ಈ ಘಟನೆ ನಡೆದಿದೆ ಎಂದು ಅಭ್ಯರ್ಥಿಗಳ ಪರವಾಗಿ ಆಗಮಿಸಿದ್ದ ಏಜೆಂಟರು ದೂರಿದ್ದಾರೆ.